Home » ಧರ್ಮಸ್ಥಳ ಕುಣಿತ ಭಜನ ತರಬೇತು ಸರದಾರ: ನಡಿಗೆಯನ್ನೇ ಹೆಜ್ಜೆಯಾಗಿಸಿ ಭಜಕರ ಜತೆ ಹೆಜ್ಜೆ ಬೆರೆಸಿದ ‘ಭಲೇ ಭಜೊರೋ’ ಸಂದೇಶ್‌ ಸುವರ್ಣ

ಧರ್ಮಸ್ಥಳ ಕುಣಿತ ಭಜನ ತರಬೇತು ಸರದಾರ: ನಡಿಗೆಯನ್ನೇ ಹೆಜ್ಜೆಯಾಗಿಸಿ ಭಜಕರ ಜತೆ ಹೆಜ್ಜೆ ಬೆರೆಸಿದ ‘ಭಲೇ ಭಜೊರೋ’ ಸಂದೇಶ್‌ ಸುವರ್ಣ

0 comments

ಬೆಳ್ತಂಗಡಿ: ಜೀವನದುದ್ದಕ್ಕೂ ನಡಿಗೆಯನ್ನೇ ಭಜನೆಯ ಹೆಜ್ಜೆಯಾಗಿಸಿ ಜಲಪಾತದಂತೆ ಧುಮ್ಮಿಕ್ಕುವ ನಿಷ್ಕಲ್ಮಶ ಪ್ರೀತಿಯಿಂದ ಭಜಕರ ಜತೆ ಹೆಜ್ಜೆ ಬೆರೆಸಿದ ಸಾಧಕ, ‘ಭಜೊರೋ ಮಾರುತಿʼ ಬೆಳ್ತಂಗಡಿಯ ಈ ಸಂದೇಶ್‌ ಸನ್ಮಾರ್ಗ ಸುವರ್ಣರವರು.

ಉಜಿರೆಯ ಸಿರಿ ಸಂಸ್ಥೆಯಲ್ಲಿ ಉದ್ಯೋಗವಾದರೆ ಭಜನೆ ಅವರ ಪ್ರವೃತ್ತಿ. ಸಂದೇಶರು ಬೆಳ್ತಂಗಡಿ ತಾಲೂಕಿನ ಭಜನಾ ತರಬೇತು ಸಂಘದ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯಮಟ್ಟದ ಭಜನಾ ಕಮ್ಮೋಟತ್ಸವದ ಸಂಪನ್ಮೂಲ ವ್ಯಕ್ತಿಯಾಗಿ, ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಮಂಜುನಾಥೇಶ್ವರ ಭಜನಾ ಪರಿಷತ್‌ನ ಕಾರ್ಯದರ್ಶಿಯಾಗಿ ಅವರು ಭಜನೆಗೆ ತನ್ನನ್ನು ತಾನು ಮುಡಿಪಾಗಿಸಿಕೊಂಡಿದ್ದಾರೆ.

ದೇವರ ಭಜನೆ ಹಾಡುವುದು ಹೇಗೆ ಎಂಬುವುದನ್ನು ಶಾರೀರಿಕವಾಗಿ, ಮಾನಸಿಕವಾಗಿಯೂ ಒಗ್ಗಿಸಿಕೊಂಡು ಭಜಕರಿಗೆ ತಿಳಿಸಿ ಕೊಡುವ ಇವರ ಪರಿಣತಿಯೇ ವೈಶಿಷ್ಟ್ಯಪೂರ್ಣವಾದುದು. ಭಜನೆಯ ಮೂಲಕ ಭಕ್ತಿಯಿಂದ ಭಗವಂತನನ್ನು ಆರಾಧಿಸಿ ಅನುಗ್ರಹಕ್ಕೆ ಪಾತ್ರರಾಗುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿದೆ. ಭಜನೆಯ ತರಬೇತಿಯ ಜತೆಗೆ ಶ್ರೀಯುತ ಸಂದೇಶ್‌ ಸುವರ್ಣರು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಯೋಗಾಭ್ಯಾಸ ಪ್ರಾರ್ಥನೆ ದ್ಯಾನದೊಂದಿಗೆ ಅಪಾರ ತಿಳುವಳಿಕೆಯುಳ್ಳವರಾಗಿದ್ದಾರೆ. ಅವರ ಈ ತಿಳುವಳಿಕೆಯೇ ಭಜಕರ ಹೆಜ್ಜೆಗಳು ಅವರನ್ನು ರಾಜ್ಯವಿಡೀ ಆಹ್ವಾನಿಸುತ್ತಿವೆ.

ಶ್ರೀಯುತರು ಭಜನೆಯ ಪ್ರಗತಿ, ಶಿಸ್ತು, ಕ್ರಿಯಾಶೀಲತೆ, ಕೌಶಲ ಸಾಧನೆಯ ಅಪಾರ ಪಾಂಡಿತ್ಯಯುಳ್ಳವರಾಗಿದ್ದು, ಉಳ್ಳಾಲದಲ್ಲಿ ನಡೆದ ಅಂತರ್‌ ಜಿಲ್ಲಾ ಭಜನಾ ಸ್ಪರ್ಧೆಯಲ್ಲಿ “ಭಜೊರೋ ಮಾರುತಿ’ ಪ್ರಶಸ್ತಿಯನ್ನು ಪಡೆದಿರುತ್ತಾರೆ.

banner

ಬೆಳ್ತಂಗಡಿ ತಾಲೂಕಿನ ವಾಣಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ದೀಪ್ತಿ ಮತ್ತು ಇಬ್ಬರು ಮಕ್ಕಳ ಸುಖೀ ಸಂಸಾರ. ಸಂದೇಶರ ಜೀವನಕ್ಕೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಆಶಿಸುತ್ತಾ ಸಂದೇಶ ಸನ್‌ಮಾರ್ಗರನ್ನು ನಮ್ಮ ಪ್ರತಿನಿಧಿ ಸಂದರ್ಶಿಸಿದಾಗ ಒಂದಷ್ಟು ಅನುಭವಗಳು ನಮ್ಮದಾಗಿದೆ.

ಒಟ್ಟಾದರೆ ಭಜನೆ, ಒಗ್ಗಟ್ಟು ಹೋದರೆ ವಿಭಜನೆ

ಭಜನೆ ಎಂದರೇನು?
ಸನಾತನ ಸಂಸ್ಕೃತಿಯಲ್ಲಿ ಮನುಷ್ಯರು ಸಂಸ್ಕಾರಯುತವಾಗಿ ಬದುಕಿ ಬಾಳಲು ವೇದಗಳು ಮತ್ತು ಉಪನಿಷತ್ತುಗಳು ಆಧಾರವಾಗಿರುತ್ತದೆ. ಋಗ್ವೇದ ಗದ್ಯರೂಪದಲ್ಲಿದ್ದರೆ, ಯಜುರ್ವೇದವು ಗದ್ಯವು ಪದ್ಯವು ಅಲ್ಲದ ರೂಪದಲ್ಲಿ ಇರುತ್ತದೆ. ಸಾಮವೇದವು ಸಂಪೂರ್ಣ ಪದ್ಯ ರೂಪದಲ್ಲಿರುತ್ತದೆ. ಇಂದಿನ ಕಾಲದಲ್ಲಿ ವೇದ ಅಧ್ಯಯನ ಮಾಡಲು, ಪೂಜೆ ಮಾಡಲು, ಮಂತ್ರ ಪಠಿಸಲು ಇಂತಹುದೇ ವರ್ಗದವರಿಗೆ ಸೀಮಿತ ಎಂಬ ಮೂಡ ಕಟ್ಟುಪಾಡು ಆವರಿಸಿತ್ತು. ಆ ಸಂದರ್ಭದಲ್ಲಿ ಜ್ಞಾನ್‌ದೇವ್‌ ತುಕಾರಾಮ್‌, ಏಕನಾಥ್‌ ಪಂಡರಿಭಾಯ್‌, ಪುರಂದರದಾಸರು, ಕನಕದಾಸರಂತಹ ಅನೇಕ ದಾಸವರೇಣ್ಯರು ವೇದದ ಸಾರವನ್ನು ಜನರಿಗೆ ತಿಳಿಯುವಂತೆ ಸುಲಭವಾಗಿ ಭಜನೆಯ ರೂಪದಲ್ಲಿ ರಚಿಸಿ ಅದನ್ನು ಹಾಡಿ ಎಲ್ಲಾ ವರ್ಗದವರು ಭಜನೆಯ ಮೂಲಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸುವ ಸುಲಭ ವಿಧಾನವನ್ನು ತೋರಿಸಿಕೊಟ್ಟರು.

ಭಜನೆ ಎಂದರೆ ಒಬ್ಬ ಹಾಡಿದ ಸಾಲನ್ನು ಎಲ್ಲರೂ ಒಟ್ಟಾಗಿ ಧ್ವನಿಗೂಡಿಸಿ ಹಾಡುವುದು. ಭಜನೆಯ ವಿರುದ್ಧ ಪದವೇ ವಿಭಜನೆ. ಅಂದರೆ ಒಗ್ಗಟ್ಟಿನಲ್ಲಿ ಭಗವಂತನನ್ನು ಅರ್ಚಿಸಿದರೆ ಮಾತ್ರ ಫಲ ದೊರೆಯುವುದು ಎಂದರ್ಥ. “ಭಜ್”‌ ಎಂಬ ಸಂಸ್ಕೃತದ ಕ್ರಿಯಾಧಾತುವಿನಿಂದ ಹುಟ್ಟಿದ ಈ ಪದ. “ಭಜ್‌” ಎಂದರೆ ಸೇವಾಯಾಮಿ ಎಂದರ್ಥ. ಅಂದರೆ ನನ್ನನ್ನು ಸೇವಿಸುತ್ತೇನೆ. ಅಂದರೆ ಸೇವೆ ಮಾಡುತ್ತೇನೆ ಎಂಬ ಅರ್ಥವನ್ನು ಕೊಡುತ್ತದೆ. ಭಜನೆ ಎಂಬುದು ಕೇವಲ ಭಗವಂತನನ್ನು ಏಕಾಗ್ರ ಚಿತ್ತದಿಂದ ಭಜಿಸಿ ನಮ್ಮನ್ನು ನಾವೇ, ಆತ್ಮೋನ್ನತಿಯ ಕಡೆಗೆ ಕೊಂಡೊಯ್ಯುವ ಸುಲಭ ಸಾಧನ. ಏಕಾಹ ಭಜನೆ, ಸಪ್ತಾಹ ಭಜನೆ, ನವಾಹ ಭಜನೆ ಮತ್ತು ಅಖಂಡ ಭಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ, ಪಾಲ್ಗೊಂಡವನ ಅಳಿದಂತಹ ಪಿತೃ ಪಿತಾಮಹ ಪ್ರಪಿತಾಮಹಾರಂತಹ ಆತ್ಮಗಳಿಗೆ ಮೋಕ್ಷ ದೊರೆಯುತ್ತದೆ. ಆದುದರಿಂದ ಭಗವಂತನ ನಾಮಸ್ಮರಣೆಯನ್ನು ಭಜಿಸಿ ಧನ್ಯರಾಗೋಣ.

ಈಗಿನ ಯುವ ಜೆನ್‌ ಜೀನವರಿಗೆ ಇದರ ಕುರಿತು ತಿಳುವಳಿಕೆ ಅಗತ್ಯವೇ?

ಈಗಿನ ಯುವ ಪೀಳಿಗೆ, ಜೆನ್‌ಜೀ ನವರಿಗೆ ಭಜನೆಯ ಬಗ್ಗೆ ತಿಳುವಳಿಕೆ ಅಗತ್ಯ ಮತ್ತು ಅದು ತುಂಬಾ ಉಪಯೋಗಕಾರಿ. ಏಕೆಂದರೆ, ಈಗಿನ ವಾತಾವರಣದಲ್ಲಿ ಹುಟ್ಟಿದವರಿಗೆ ಸನಾತನ ಸಂಸ್ಕೃತಿಯ ಅರಿವನ್ನು ಹೆತ್ತವರು ಕೊಡಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಿಗುವ ಫ್ಯಾಶನ್‌, ಅನ್ಯ ಸಂಸ್ಕೃತಿಯ ಆಕರ್ಷಣೆ, ಅನ್ಯ ಸಂಸ್ಕೃತಿಯ ಉಡುಗೆ ಇವೆಲ್ಲ ಮಕ್ಕಳಿಗೆ ಮನ ಸೋಲುವಂತೆ ಮಾಡುತ್ತದೆ. ಅನ್ಯಮತದ ಮಕ್ಕಳಿಗೆ ಆಯಾಯ ಧರ್ಮ ಗುರುಗಳು ಧರ್ಮ ಶಿಕ್ಷಣ ಕೊಡುತ್ತಾರೆ. ಆದರೆ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಹಿಂದೆ ಇದ್ದ ಗುರುಕುಲ ಪದ್ಧತಿ ಕಾಣೆಯಾಗಿದೆ. ಆದುದರಿಂದ ಇಂದಿನ ಮಕ್ಕಳಿಗೆ ಭಜನೆಯ ಮೂಲಕ ಸನಾತನ ಸಂಸ್ಕೃತಿಯ ಸೊಗಡನ್ನು ಪರಿಚಯ ಮಾಡಿದರೆ ಅವರು ಚಿಕ್ಕಂದಿನಿಂದಲೇ ಸದ್ಗುಣರಾಗುತ್ತಾರೆ. ದಾರಿ ತಪ್ಪುವುದಿಲ್ಲ.

ಭಜನೆ ಆಧ್ಯಾತ್ಮಿಕದ ಒಲವು ತೋರಲು ಸಹಕಾರಿಯೇ?

ಭಜನೆ ಮನುಷ್ಯನಿಗೆ ಆಧ್ಯಾತ್ಮಿಕ ಜೀವನದ ಒಲವು ತೊರಲು ನಿಜಕ್ಕೂ ಸಹಕಾರಿ. ಏಕೆಂದರೆ ತಾನು ಮನುಷ್ಯನಿಗೆ ಹುಟ್ಟಿರುವುದು ಈ ಭೂಮಿಯಲ್ಲಿ ಶೋಕಿ ಮಾಡುವುದಕ್ಕಲ್ಲ. ಹಿಂದಿನ ಸಾಲ ತೀರಿಸಲೆಂದೇ ಬಂದಿದೆವಯ್ಯ ಜನ್ಮವ ತಲೆಯ ಎಂಬ ದಾಸರ ಭಜನೆಯಂತೆ ನಾವು ಅದೆಷ್ಟೋ ಜನ್ಮಗಳನ್ನು ದಾಟಿ ಆ ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಪ್ರಾಯಶ್ಚಿತ್ತ ಮಾಡಿ ಉತ್ತಮ ಜೀವಿಗಳಾಗಿ ಬದುಕಿ ಭಗವಂತನ ಪಾದ ಕಮಲಕೆ ಅರ್ಪಣಿಯಾಗಲು ಸುಲಭ ದಾರಿಯೇ ಈ ಭಜನೆ.

ನೀವು ಎಷ್ಟು ಭಜನಾ ತಂಡಗಳನ್ನು ರೂಪಿಸಿದ್ದೀರಿ?

ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ತುಮಕೂರು, ಕೊಡಗು, ಶಿರಸಿ, ಬೆಂಗಳೂರು ಜಿಲ್ಲೆಗಳಲ್ಲಿ ಭಜನಾ ತರಬೇತಿ ನೀಡಿ 6,500ಕ್ಕೂ ಹೆಚ್ಚು ಭಜಕರನ್ನು ತರಬೇತಿಗೊಳಿಸಿರುವುದು ಇವರ ಸಾಧನೆಗೆ ಮತ್ತೊಂದು ಗರಿ. ಕರ್ನಾಟಕ ರಾಜ್ಯ ಮಾತ್ರವಲ್ಲದೆ ಮುಂಬೈಯ ಜೋಗೀಶ್ವರಿ, ಕನ್ಯಾಕುಮಾರಿಯ ಪಳನಿ ಶಿರಡಿ ಹಾಗೂ ಕೇರಳದ ತಿರುವನಂತಪುರಗಳಲ್ಲಿ ಭಜನಾ ಕೈಂಕರ್ಯವನ್ನು ಮಾಡಿದ್ದು, ಹಿಂದೂ ಧರ್ಮಕ್ಕೆ ಕೊಟ್ಟ ಕೊಡುಗೆಯಾಗಿದೆ.

ನೆಮ್ಮದಿ, ಏಕಾಗ್ರತೆಗೆ ಭಜನೆ ಪ್ರೇರಣೆ ಹೇಗೆ?

ಮನುಷ್ಯನ ಜೀವನದಲ್ಲಿ ಶಾಂತಿ, ನೆಮ್ಮದಿ ಏಕಾಗ್ರತೆ ಬರಲು ಭಜನೆ ಪ್ರೇರೇಪಿಸುವುದು, ಮನುಷ್ಯನು ತನ್ನ ದಿನಚರಿಗಳಲ್ಲಿ ಒಂದಿಷ್ಟು ಸಮಯವನ್ನು ಭಜನೆಗೆ ತೊಡಗಿಸಿಕೊಂಡು, ಅದರಲ್ಲಿ ಲೀನವಾಗಿ ತನ್ನ ಬಂಧು ಕುಟುಂಬ, ಕೆಲಸ, ವಹಿವಾಟು ಎಲ್ಲವನ್ನು ಮರೆತು, ‘ಎಲ್ಲವೂ ನೀನೇ ಭಗವಂತ, ಎಲ್ಲವೂ ನಿನ್ನಿಂದಲೇ ಭಗವಂತ, ಎಲ್ಲವೂ ನಿನಗೆ ಸಮರ್ಪಣೆ, ಭಗವಂತ ಭಕ್ತಿ ಪ್ರೀತಿಯಿಂದ ಭಜಿಸಿದಾಗ ಮನುಷ್ಯನ ಜೀವನದಲ್ಲಿ ಒಳಿತನ್ನು ಕಾಣಲು ಸಾಧ್ಯ.

ಭಜನಾ ಕಮ್ಮಟ ಎಂದರೇನು? ಪ್ರಯೋಜನವೇನು?

ಹತ್ತು ತಾಯಿಯ ಮಕ್ಕಳು ಒಂದು ಸೂರಿನಡಿ ಒಗ್ಗಟ್ಟಾಗಿ ಭಜಿಸುವುದನ್ನು ಸಂಘ ಅಥವಾ ಮಂಡಳಿ ಎನ್ನುತ್ತಾರೆ. ಆದರೆ ಈ ಬ್ರಹ್ಮಾಂಡವೇ ಭಗವಂತನ ಆಲಯ, ನಾವೆಲ್ಲ ಭಗವಂತನ ಸೇವಕರು ಎಂದು ಬೃಹತ್‌ ಸಂಖ್ಯೆಯಲ್ಲಿ ಯಾವುದಾದರೊಂದು ಮೈದಾನದಲ್ಲೋ, ವಿಶಾಲವಾದ ಚಪ್ಪರದಡಿಯಲ್ಲೋ ಒಗ್ಗಟ್ಟಾಗಿ ಕುಳಿತು ಅಥವಾ ನಲಿದು ನಡೆಸುವ ಸೇವೆಯೇ ಭಜನಾ ಕಮ್ಮಟ. ಭಜನಾ ಕಮ್ಮಟ ಎಂಬುದು ಮಹಾ ಯಜ್ಞ ಮಾಡಿದಂತೆ. ಭಜನಾ ಕಮ್ಮಡ ಎಂಬುದು ಒಂದು ದೇವಸ್ಥಾನಕ್ಕೆ ಬ್ರಹ್ಮಕಲಶ ಮಾಡಿದಂತೆ.

ಅವರಿಂದ ಆಗುವ ಪ್ರಯೋಜವೇನೆಂದರೆ, ಒಂದು ದೇವಸ್ಥಾನಕ್ಕೆ ಬ್ರಹ್ಮಕಲಶ ಮಾಡಿದರೆ ಅದರಲ್ಲಿ ಭಾಗಿಯಾದ ಎಲ್ಲಾ ಭಕ್ತರಿಗೂ ಬ್ರಹ್ಮಕಲಶ ಆದಂತೆ. ಆ ಊರಿಗೆ ಸುಭಿಕ್ಷೆಯಾದಂತೆ. ಅದೇ ರೀತಿ ಭಜನಾ ಕಮ್ಮಟವು ಕೂಡಾ ಆ ಪರಿಸರದ ಹಾಗೂ ಅದರಲ್ಲಿ ಭಾಗಿಯಾದ ಎಲ್ಲಾ ಭಜಕರ ಹಾಗೂ ನೆರೆದವರ ಮತ್ತು ಭಜನೆಯ ತರಂಗ ವ್ಯಾಪಿಸಿದ ವ್ಯಾಪ್ತಿಯ ತನಕದ ಎಲ್ಲಾ ಋಣಾತ್ಮಕ ಪೀಡೆಗಳು ದೂರ ಆಗಿ ಧನಾತ್ಮಕ ಸಚ್ಚಿಂತನೆ ಹಾಗೂ ಆತ್ಮಸ್ಥೈರ್ಯ ಒಗ್ಗೂಡುವಲ್ಲಿ ಭಜನಾ ಕಮ್ಮಟ ಸಹಕಾರಿಯಾಗುತ್ತದೆ.

ಕುಳಿತು ಮತ್ತು ಕುಣಿದು ಭಜಿಸುವ ಭಜನೆ ವ್ಯತ್ಯಾಸವೇನು?

ಭಜನೆಯೇ ಆಗಲಿ, ಪೂಜೆಯೇ ಆಗಲಿ, ಧ್ಯಾನವೇ ಆಗಲಿ ದೇವರ ಜೊತೆ ಮಾತನಾಡುವುದೇ ಆಗಲಿ, ಜಪತಪಗಳೇ ಆಗಲಿ ಇವೆಲ್ಲವನ್ನು ಕುಳಿತು ಮಾಡಬಹುದು. ನಲಿದು ಮಾಡಬಹುದು. ಮಲಗಿಯೂ ಮಾಡಬಹುದು. ನಿಂತೂ ಮಾಡಬಹುದು. ದೇವರ ಸ್ಮರಣೆಗೆ ಹೀಗೆಯೇ ಮಾಡಬೇಕೆಂಬ ಪರಿಧಿಯೇನಿಲ್ಲ. ತನ್ನೊಳಗಿರುವ ಆತ್ಮನು ಜಾಗೃತನಾಗಿ ಇದ್ದರೆ ಸಾಕು. ʼಐದು ಕಾಲಿನ ಮಂಚ, ಕುಂಟ ಮಲಗಿದ್ದ, ಮೂರು ದಂಡೆಗಳನ್ನು ಬಗಳಿಗಿರಿಸಿದ್ದʼ ಎಂಬ ದಾಸರ ಭಜನೆಯಂತೆ ನಾವೆಲ್ಲರೂ ಕುಂಟರು, ಅಂದರೆ ನಾವು ಒಬ್ಬರಿಗೊಬ್ಬರು ಮಾತನಾಡಲು ನಮಗೆ ಬೇಕಾಗುವ ಕೆಲಸ ಮಾಡಲು ಓಡಾಡಲು ಈ ಶರೀರವನ್ನು ಧರಿಸಿಕೊಂಡು ಬಂದಿದ್ದೇವೆ. ನಾವು ಸತ್ತ ತಕ್ಷಣ “ಅದು ಅವನ ಹೆಣ” ಎನ್ನುತ್ತಾರೆ. ಬದಲಾಗಿ ಅದು ಅವನು ಎನ್ನುವುದಿಲ್ಲ. ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ ಎಂಬ ಉಗಭೋಗದಂತೆ ಭಗವಂತನನ್ನು ಅರ್ಚಿಸಲು ಭಜಿಸಲು ಕುಳಿತುಕೊಂಡೇ ಮಾಡಬೇಕೆಂದಿಲ್ಲ. ಕುಳಿತು ಭಜಿಸುವಾಗ ತನ್ನಷ್ಟಕ್ಕೆ ಭಜಕನ ಮನಸ್ಸು ಕುಣಿಯಲು ಪ್ರಾರಂಭಿಸಿದರೆ ಆತನು ನಲಿಯುವುದು ಸ್ವಾಭಾವಿಕ.

ಕುಳಿತು ಭಜಿಸಿದರೆ ಧ್ಯಾನಯುಕ್ತರಾಗುತ್ತೇವೆ. ನಲಿದು ಭಜಿಸಿದರೆ ಶರೀರಕ್ಕೆ ಪೂರಕವಾದ ವ್ಯಾಯಾಮ ದೊರಕುವುದಲ್ಲದೇ ಕಾಯ ವಾಚ ಮನಸ ಎಲ್ಲವೂ ಏಕಾಗ್ರ ಚಿತ್ತದಲ್ಲಿದ್ದು ಭಗವಂತನ ಸೇವೆಯಲ್ಲಿ ತಲ್ಲೀನತೆಯನ್ನು ಪಡೆಯುವಲ್ಲಿ ಸಹಕಾರಿಯಾಗುತ್ತದೆ.
(ಐದು ಕಾಲಿನ ಮಂಚ ಎಂದರೆ ಐದು ಕಾಲುಗಳು ಅಗ್ನಿ ವಾಯು ಆಕಾಶ, ಭೂಮಿ, ನೀರು. ಈ ಐದು ಪಂಚಭೂತಗಳಿಂದ ರಚಿಸಲ್ಪಟ್ಟ ಈ ಶರೀರದೊಳಗೆ ಆತ್ಮನಾದ ನಾವು ಪರಮಾತ್ಮನ ಇಚ್ಛೆಯ ಪ್ರಕಾರ ಸೇರಿಕೊಂಡಿದ್ದೇವೆ. ಮೂರು ಹಂಡೆಗಳೆಂದರೆ ಸಾತ್ವಿಕ ಗುಣ, ರಜೊ ಗುಣ, ತಾಮಸ ಗುಣ. ಈ ಮೂರು ಗುಣಗಳು ಹುಟ್ಟಿನಿಂದಲೇ ಬರುತ್ತದೆ)

ಶಶಿಧರ್‌ ಕೆ. ಮಡಂತ್ಯಾರ್‌
skulalvenur@gmail.com

You may also like