ಮಂಗಳೂರು: ರಾ. ಹೆ. 66 ರಲ್ಲಿ, ಕೆಪಿಟಿ ವೃತ್ತದ ಬಳಿಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯೋಧನೋರ್ವ ಮೃತಪಟ್ಟಿದ್ದಾರೆ. ಕೊಯಿಲ ನಿವಾಸಿಯಾಗಿದ್ದು ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೀತಾರಾಮ ಗೌಡ (47) ಮೃತ ಯೋಧ.

ಅವರು ಸ್ಕೂಟರ್ನಲ್ಲಿ ಕೆಪಿಟಿ ಕಡೆಯಿಂದ ಕೊಟ್ಟಾರಚೌಕಿ ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ವಿಭಜಕಕ್ಕೆ ಢಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಬೇರೆ ವಾಹನ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆಯೇ ಅಥವಾ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು ವಿಭಜಕಕ್ಕೆ ಢಿಕ್ಕಿಯಾಗಿದೆಯೇ ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ. ಢಿಕ್ಕಿಯಾದ ಬಳಿಕ ಸ್ಕೂಟರ್ ಸುಮಾರು 15 ಮೀಟರ್ ದೂರದವರೆಗೆ ವಿಭಾಜಕವನ್ನು ಸವರಿಕೊಂಡು ಹೋಗಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿರುವುದು ಗೊತ್ತಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಸೀತಾರಾಮ ಗೌಡರು ಸಿಐಎಸ್ಎಫ್ ಜಮ್ಮು ಸೆಂಟ್ರಲ್ ಜೈಲಿನಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರೆಂದು ಗೊತ್ತಾಗಿದೆ.

