ಹೊಸದಿಲ್ಲಿ: ಎಲ್ ನಿನೋ ಪ್ರಭಾವದಿಂದ ತಡವಾಗಿ ದೇಶಕ್ಕೆ ಅಪ್ಪಳಿಸಿದ ಮುಂಗಾರು ಈಗ ಚುರುಕು ಗೊಂಡಿದೆ. ಇದರಿಂದ ಜುಲೈ ಮೊದಲ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ ದೇಶದಲ್ಲಿ ಮಳೆ ಕೊರತೆ ಶೇ. 38 ರಿಂದ ಶೇ.12ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಬುಧವಾರ ಹೇಳಿದೆ. ಇದರಿಂದ ಬಹುತೇಕ ರಾಜ್ಯಗಳ ಜಲಾಶಯಗಳಲ್ಲಿ ಮುಂದಿನ ಕೃಷಿಗೆ ಬೇಕಾಗುವಷ್ಟು ನೀರು ಸಂಗ್ರಹವಾಗಿದೆ ಎಂದು ವರದಿಯಾಗಿದೆ.

ಈ ನಡುವೆ ಖಾರಿಫ್ ಋತುವಿನ ಪ್ರಗತಿ, ಆರ್ಥಿಕತೆ ಸಹಿತ ಇತರ ಕ್ಷೇತ್ರಗಳ ಮೇಲೆ ಎಲ್ ನಿನೊ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ ಸಭೆ ನಡೆಸಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎಲ್ ನಿನೋ ಸಾಮಾನ್ಯ ಪರಿಣಾಮ ಎದುರಾಗಬಹುದು. ಈ ಪರಿಣಾಮದಿಂದ ಕೂಡಲೇ ಮಳೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎನ್ನಲಾಗದು ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಸಭೆಯಲ್ಲಿ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕ್ರಮ, ಜಲಾಶಯಗಳ ನೀರಿನ ಮಟ್ಟ ಮತ್ತು ಬಿತ್ತನೆ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ವಾರಕ್ಕೊಮ್ಮೆ ಸಭೆ ನಡೆಸುವುದು. ಜಾನುವಾರುಗಳಿಗೆ ಒಣ ಹಾಗೂ ಹಸುರು ಮೇವಿನ ಲಭ್ಯತೆಯನ್ನು ಪರಿಶೀಲಿಸಲು ಮತ್ತು ಸಮಸ್ಯಾತ್ಮಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಬಗ್ಗೆಯೂ ನೋಡಿಕೊಳ್ಳುವ ಸೂಚಿಸಲಾಗಿದೆ. ಜತೆಗೆ ಹೆಚ್ಚಿದ ಶಾಖ, ಹವಾಮಾನ ವೈಪರೀತ್ಯ ಮತ್ತು ಸಾಂಕ್ರಾಮಿಕ, ಡೆಂಗ್ಯೂ ಮುಂತಾದ ಕಾಯಿಲೆಗಳ ಹರಡುವಿಕೆ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಗೋಧಿ, ಬೇಳೆಕಾಳುಗಳ ದಾಸ್ತಾನು ಮತ್ತು ರಸಗೊಬ್ಬರಗಳ ಲಭ್ಯತೆ ಉತ್ತಮವಾಗಿದೆ. ಇವುಗಳ ಬೆಲೆ ಮತ್ತು ಪೂರೈಕೆಯ ಮೇಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮುಂಬಯಿಯ ವಾರದ ಮಳೆ, ಬೆಂಗಳೂರಿನ ವರ್ಷದ ಮಳೆಗೆ ಸಮ!
ಮುಂಬಯಿಯಲ್ಲಿ ಜೂ. 30 ರಿಂದ ಜು.6 ರ ತನಕ ಸುರಿದ ಮಳೆಯ ಪ್ರಮಾಣ ಎಷ್ಟೆಂದರೆ ಒಟ್ಟಾರೆ ಬೆಂಗಳೂರಿನಲ್ಲಿ ಸುರಿಯುವ ವಾರ್ಷಿಕ ಒಟ್ಟು ಮಳೆಗೆ ಅದು ಸಮನಾಗಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ ದಿಲ್ಲಿ ಹಾಗೂ ಪುಣೆಯಲ್ಲಿ ಸರಾಸರಿ ವಾರ್ಷಿಕ ಮಳೆಗಿಂತಲೂ ಅಧಿಕವಾಗಿದೆ. ಭಾರತೀಯ ಹವಾಮಾನ ಇಲಾಖೆಯ ಕೊಲಾಬಾ ವೀಕ್ಷಣಾಲಯವು 882.6 ಮಿ.ಮೀ. ಮಳೆ ಮತ್ತು ಸಾಂತಾಕ್ರೂಜ್ 988.8 ಮಿ.ಮೀ. ಮಳೆ ದಾಖಲಿಸಿದೆ. ಆದರೆ ಬೆಂಗಳೂರಿನಲ್ಲಿ ವರ್ಷಕ್ಕೆ 986 ಮಿ.ಮೀ. ಮಳೆ ಸುರಿಯುತ್ತದೆ!

