ದೇಶದ ಅತ್ಯಂತ ಪ್ರಮುಖ ಧಾರ್ಮಿಕ ಹಾಗೂ ಶ್ರೀಮಂತ ಪುಣ್ಯಕ್ಷೇತ್ರವೆನಿಸಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಅದರಲ್ಲೂ ಕರ್ನಾಟಕದ ಭಕ್ತಾದಿಗಳ ಸಂಖ್ಯೆ ಹೆಚ್ಚು ಎನ್ನಬಹುದು. ತಿರುಪತಿಗೆ ಮತ್ತು ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ತಿರುಮಲದಲ್ಲಿ ಪ್ರತಿದಿನ ಮುಂಜಾನೆ ನಡೆಯುವ ವಿಶೇಷ ಸೇವೆಗಳಲ್ಲಿ ಒಂದಾದ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲಿ ಸಲ್ಲಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಕರ್ನಾಟಕ ಆರತಿ’ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಈ ವಿಶೇಷ ಗೌರವ ಸಿಕ್ಕಿದ್ದಾದರೂ ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಆರಂಭದಲ್ಲಿ ಹೇಳಿದಂತೆ ತಿರುಪತಿ ತಿಮ್ಮಪ್ಪನಿಗೂ ಕರ್ನಾಟಕಕ್ಕೂ ಹಿಂದಿನಿಂದಲೂ ಬಹಳ ಅವಿನಾಭಾವ ನಂಟು. ಅದರಲ್ಲಿಯೂ ವಿಜಯನಗರ ಅರಸ ಶ್ರೀ ಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ಅಪ್ಪಟ ಭಕ್ತ. ಇಂದು ತಿರುಪತಿಯಲ್ಲಿರುವ ತಿಮ್ಮಪ್ಪನ ಸಂಪತ್ತು ಶ್ರೀ ಕೃಷ್ಣದೇವರಾಯ ನೀಡಿದ ದೇಣಿಗೆ ಎಂದು ಇತಿಹಾಸಗಳು ಹೇಳುತ್ತವೆ. ಇಂದು ದೇಶದ ವಿವಿಧ ರಾಜ್ಯಗಳ ಜನರು ಇಲ್ಲಿಗೆ ಭೇಟಿ ನೀಡಿದರು ಕೂಡ ಇಲ್ಲಿ ಕರ್ನಾಟಕದ ಹೆಸರಿನಲ್ಲಿಯೇ ದೇವರಿಗೆ ಮೊದಲ ಪೂಜೆ ಸಲ್ಲುವುದಕ್ಕೆ ಇದೇ ಪ್ರಮುಖವಾದ ಕಾರಣ.
ಹೌದು, ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಕರ್ನಾಟಕದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಅರಸರು, ಅದರಲ್ಲೂ ಶ್ರೀಕೃಷ್ಣದೇವರಾಯರು, ದೇವಸ್ಥಾನದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ದೇವಾಲಯದ ಗೋಪುರಗಳು, ಮಂಟಪಗಳು, ರತ್ನಾಭರಣಗಳು ಹಾಗೂ ನಿತ್ಯ ಪೂಜಾ ವ್ಯವಸ್ಥೆಗಳಿಗೆ ಅವರು ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಕರ್ನಾಟಕದ ರಾಜವಂಶಗಳು ಹಾಗೂ ಮೈಸೂರು ಸಂಸ್ಥಾನ ತಿರುಮಲದೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದವು. ದೇವಸ್ಥಾನದ ನಿತ್ಯ ಕೈಂಕರ್ಯ, ಪೂಜೆ ಹಾಗೂ ಸೇವೆಗಳಿಗಾಗಿ ಅನೇಕ ದತ್ತಿಗಳು ಮತ್ತು ಆರ್ಥಿಕ ನೆರವು ನೀಡಲಾಯಿತು.
ಮೈಸೂರು ಮಹಾರಾಜರ ಕಾಲದಲ್ಲಿ ತಿರುಮಲ ಶ್ರೀವಾರಿಯ ಗರ್ಭಗುಡಿಯೊಳಗೆ ನಿರಂತರವಾಗಿ ಬೆಳಗುವ ಪವಿತ್ರ ದೀಪಗಳಾದ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗಾಗಿ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಅದ್ಭುತ ಸಂಪ್ರದಾಯವನ್ನು ಆರಂಭಿಸಲಾಗಿತ್ತು. ಹೀಗೇ ಮೈಸೂರು ಸಂಸ್ಥಾನವು ನೀಡಿದ ಈ ಸುದೀರ್ಘ ಧಾರ್ಮಿಕ ಮತ್ತು ಆರ್ಥಿಕ ಕೊಡುಗೆಗಳ ಗೌರವಾರ್ಥವಾಗಿ, ಪ್ರತಿದಿನ ಬೆಳಿಗ್ಗೆ ಸುಪ್ರಭಾತ ಸೇವೆಯ ನಂತರ ನೆರವೇರುವ ದಿನದ ಮೊದಲ ಕರ್ಪೂರದ ಆರತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಸಲ್ಲಿಸುವ ಐತಿಹಾಸಿಕ ಹಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿದೆ. ಈ ಗೌರವವು ಕರ್ನಾಟಕದ ರಾಜವಂಶಗಳು ಮತ್ತು ಭಕ್ತರು ದೇವಾಲಯಕ್ಕೆ ನೀಡಿದ ಐತಿಹಾಸಿಕ ಕೊಡುಗೆಗಳ ನೆನಪಿಗಾಗಿ ಮುಂದುವರಿದಿದೆ ಎನ್ನಲಾಗುತ್ತದೆ
ಆರತಿ ಸ್ವೀಕರಿಸುವವರು ಯಾರು?
ತಿಮ್ಮಪ್ಪನಿಗೆ ಸಲ್ಲುವ ಕರ್ನಾಟಕದ ಹೆಸರಿನ ಮೊದಲ ಆರತಿಯನ್ನು ಸ್ವೀಕರಿಸಲು ಒಬ್ಬರು ಅಲ್ಲಿ ವಿಶೇಷವಾದ ಅಧಿಕಾರಿ ಇರುತ್ತಿದ್ದರು. ಇವರು ರಾಜ್ಯ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಘೋಷಣೆಯಂತೆ, ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ಪ್ರೋಟೋಕಾಲ್ ಹೊರಡಿಸಲು ಮುಂದಾಗಿದೆ. ಇದರ ಪ್ರಕಾರ, ಕರ್ನಾಟಕದ ಪರವಾಗಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಮೂರ್ತಿಗಳು, ಇತರ ಅರ್ಹ ಗಣ್ಯರು ಅಧಿಕೃತವಾಗಿ ಮೊದಲ ಆರತಿ ಸ್ವೀಕರಿಸುವ ಅವಕಾಶ ಪಡೆಯಲಿದ್ದಾರೆ.

