ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಭಾರತದಲ್ಲಿ ತನ್ನ ಬೇಳೆ ಬೇಯುವುದಿಲ್ಲವೆಂದುಕೊಂಡು ಇದೀಗ ತನ್ನದೇ ಆದ ಕೈಲಾಸ ಎಂಬ ದೇಶವನ್ನು ಕಟ್ಟಿಕೊಂಡು ಹೆಂಗಳೆಯರ ಮಧ್ಯೆ ಜೀವನ ನಡೆಸುತ್ತಿದ್ದಾನೆ. ಈ ನಡುವೆ ಇದೀಗ ಟಾಲಿವುಡ್ ನ ಕ್ಯಾತ ನಿರ್ದೇಶಕ ತೇಜ ಅವರು ಈ ನಿತ್ಯಾನಂದ ಸ್ವಾಮೀಜಿಗೆ ತಾನು 1 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಆದರೆ ಅದು ಹೇಗೆ ಸಾಧ್ಯವಾಯಿತು ಎಂಬ ಸ್ವಾರಸ್ಯಕರ ಘಟನೆ ಎಲ್ಲಿದೆ ನೋಡಿ.

ಟಾಲಿವುಡ್ ನಿರ್ದೇಶಕ ತೇಜ, ವಿವಾದಿತ ಸ್ವಾಮಿ ನಿತ್ಯಾನಂದನ ಜೊತೆಗಿನ ತಮ್ಮ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮಗನಿಗೆ ಆರೋಗ್ಯ ಸರಿ ಇರಲಿಲ್ಲ. ನಿತ್ಯಾನಂದ ಸ್ವಾಮಿ ಹೀಲಿಂಗ್ ಮಾಡ್ತಾರೆ, ಅವರು ಬಂದರೆ ನಿಮ್ಮ ಮಗನ ಆರೋಗ್ಯ ಸುಧಾರಿಸುತ್ತೆ ಅಂದರು. ಮಗನ ಆರೋಗ್ಯದ ವಿಷಯವಾದ್ದರಿಂದ ನಾನೂ ಸರಿ ಅಂದೆ. ಆದರೆ, ಸ್ವಾಮಿ ಬರಬೇಕಾದರೆ ಆಶ್ರಮಕ್ಕೆ 1 ಲಕ್ಷ ರೂ. ಡೊನೇಷನ್ ಕೊಡಬೇಕು ಅಂದರು. ಸರಿ ಅಂತ 1 ಲಕ್ಷದ ಚೆಕ್ ಕೊಟ್ಟೆ. ನಿತ್ಯಾನಂದ ಮನೆಗೆ ಬಂದ. ಮನೆಯಲ್ಲಿದ್ದ ಕೆಲಸದವರು, ನನ್ನ ಹೆಂಡತಿ ಎಲ್ಲರೂ ಆತನ ಕಾಲಿಗೆ ಬಿದ್ದರು. ಆದರೆ ನಾನು ಮಾತ್ರ ದೂರ ನಿಂತು ನೋಡುತ್ತಿದ್ದೆ’ ಎಂದು ತೇಜ ವಿವರಿಸಿದ್ದಾರೆ.
ಸ್ವಾಮಿ ಹೋದ ಕೆಲವು ದಿನಗಳ ನಂತರ ನಾನು ಕೊಟ್ಟ ಚೆಕ್ ಬೌನ್ಸ್ ಆಯ್ತು. ‘ಯಾಕ್ ಹೀಗೆ ಮಾಡ್ದೆ, ಯಾಕೆ ಚೆಕ್ ಕೊಟ್ಟೆ, ಅದು ಬೌನ್ಸ್ ಆಗಿದೆ’ ಅಂತ ನನ್ನ ಹೆಂಡತಿ ಬೈದಳು. ಮತ್ತೆ ಇನ್ನೊಂದು ಚೆಕ್ ಕೊಟ್ಟೆ. ಅದೂ ಬೌನ್ಸ್ ಆಯ್ತು. ‘ಮತ್ತೆ ಯಾಕ್ ಹೀಗೆ ಮಾಡ್ದೆ’ ಅಂತ ಹೆಂಡತಿ ಬೈಯೋಕೆ ಶುರು ಮಾಡಿದ್ಲು. ‘ಕೆಲಸದಲ್ಲಿ ಮರೆತುಬಿಟ್ಟೆ, ಹೋಗಿ ಅಕೌಂಟ್ಗೆ ದುಡ್ಡು ಹಾಕ್ತೀನಿ’ ಅಂತ ಬ್ಯಾಂಕ್ಗೆ ಹೊರಟೆ. ಆಗಲೇ ನಿತ್ಯಾನಂದನ ರಾಸಲೀಲೆ ಸುದ್ದಿ ಟಿವಿಯಲ್ಲಿ ಬಂತು. ಹುಡುಗಿಯರ ಜೊತೆ ಸಿಕ್ಕಿಬಿದ್ದ, ಅರೆಸ್ಟ್ ಆದ ಅಂತ ಸುದ್ದಿ ಬರ್ತಿತ್ತು. ಅಷ್ಟೇ, ನಾನು ಅಕೌಂಟ್ಗೆ ಹಣ ಹಾಕುವುದನ್ನು ನಿಲ್ಲಿಸಿದೆ. ನಮ್ಮ ಹಣ ತುಂಬಾ ಸ್ಟ್ರಾಂಗ್ ಅನ್ನಿಸ್ತು’ ಎಂದು ತೇಜ ಹೇಳಿದ್ದಾರೆ.
