Home » ಮಂಗಳೂರಿನಲ್ಲಿ ಇದ್ದಿದ್ದರೆ ಶಾಲಾ ಶಿಕ್ಷಕನಾಗಿರುತ್ತಿದ್ದೆ – ಶಾರುಖಾನ್ ಹೇಳಿಕೆ!!

ಮಂಗಳೂರಿನಲ್ಲಿ ಇದ್ದಿದ್ದರೆ ಶಾಲಾ ಶಿಕ್ಷಕನಾಗಿರುತ್ತಿದ್ದೆ – ಶಾರುಖಾನ್ ಹೇಳಿಕೆ!!

0 comments

‘ಮಂಗಳೂರಿನಲ್ಲೇ ಇದ್ದಿದ್ದರೆ, ನಾನು ಇಲ್ಲಿನ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಇಲ್ಲಿಯೇ ಶಿಕ್ಷಕನಾಗುತ್ತಿದ್ದೆ’ ಎಂದು ಬಾಲಿವುಡ್ ನಟ ಶಾರುಖ್‌ ಖಾನ್ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದ ಮುಂಚೂಣಿ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ‘ಆಯನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಎಂಬ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ “ನಮಸ್ಕಾರ ಕುಡ್ಲ, ಎಂಚ ಉಲ್ಲರ್?” ಎಂದು ತುಳು ಭಾಷೆಯಲ್ಲೇ ಮಾತು ಆರಂಭಿಸಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಮನಗೆದ್ದರು. ಬಳಿಕ ತಮ್ಮ ವೃತ್ತಿಜೀವನದಲ್ಲಿ 34 ಯಶಸ್ವಿ ವರ್ಷಗಳನ್ನು ಪೂರೈಸಿರುವ ಕಿಂಗ್ ಖಾನ್, ಮಂಗಳೂರಿನೊಂದಿಗಿನ ತಮ್ಮ ಬಾಲ್ಯದ ಅಪರೂಪದ ನಂಟನ್ನು ನೆನಪಿಸಿಕೊಂಡರು. “ನನ್ನ ಅಜ್ಜ ಮಂಗಳೂರಿನ ಎನ್‌ಎಂಪಿಟಿ (NMPT) ಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಆ ಕಾರಣಕ್ಕಾಗಿ 1965 ರಿಂದ 1967ರ ಅವಧಿಯಲ್ಲಿ ನನ್ನ ಬಾಲ್ಯದ ದಿನಗಳನ್ನು ನಾನು ಪಣಂಬೂರಿನ ಕಡಲತೀರದಲ್ಲೇ ಕಳೆದಿದ್ದೆ. ಆಗ ನಾನು ತೀರಾ ಸಣ್ಣ ಮಗುವಾಗಿದ್ದರಿಂದ ಆ ದಿನಗಳು ನೇರವಾಗಿ ನೆನಪಿಲ್ಲದಿದ್ದರೂ, ನನ್ನ ಹಿರಿಯರು ಹೇಳುತ್ತಿದ್ದ ಕಥೆಗಳು ಇಂದಿಗೂ ನನ್ನ ಮನಸಿನಲ್ಲಿ ಹಸಿರಾಗಿವೆ ಎಂದು ತಮ್ಮ ಜೇಬಿನಿಂದ ಬಾಲ್ಯದ ಅಪರೂಪದ ಫೋಟೊ ಒಂದನ್ನು ತೆಗೆದು ಅಭಿಮಾನಿಗಳಿಗೆ ಪ್ರದರ್ಶಿಸಿದರು. ಅಲ್ಲದೆ ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಇಲ್ಲಿನ ಜನರ ಆತಿಥ್ಯ ನನ್ನನ್ನು ಸದಾ ಆಕರ್ಷಿಸುತ್ತದೆ. ಎಂದರು 

ಮುಂಬೈನಲ್ಲಿ ಭಾರಿ ಸಂಖ್ಯೆಯ ಕರಾವಳಿ ಜನರಿದ್ದಾರೆ. ಇನ್ನು ನನಗೆ ಕುಡ್ಲದ ಖಾದ್ಯಗಳಲ್ಲಿ ‘ನೀರು ದೋಸೆ’ ಎಂದರೆ ಪ್ರಾಣ. ಕೇವಲ ನೀರು ದೋಸೆ ತಿನ್ನುವುದಕ್ಕಾಗಿಯೇ ನಾನು ಇನ್ನೊಮ್ಮೆ ಮಂಗಳೂರಿಗೆ ಬರುತ್ತೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾರುಖ್ ಖಾನ್ ಅವರು ತಮ್ಮ ಸಿನಿಮಾಗಳ ಸೂಪರ್ ಹಿಟ್ ಹಾಡುಗಳಾದ ‘ಚಮ್ಮಕ್ ಚಲ್ಲೋ’ ಮತ್ತು ‘ಝೂಮೇ ಜೋ ಪಠಾಣ್’ ಹಾಡುಗಳಿಗೆ ವೇದಿಕೆಯ ಮೇಲೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ನೆರೆದಿದ್ದ ಕರಾವಳಿಯ ಜನರನ್ನು ರೋಮಾಂಚನಗೊಳಿಸಿದರು.  

banner

You may also like