ಮರವೊಂದಕ್ಕೆ ಇಬ್ಬರು ಅಕ್ಕತಂಗಿಯರು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿ ಬೆಳಕಿಗೆ ಬಂದಿದೆ.

ಯಲಹಂಕ ವ್ಯಾಪ್ತಿಯಲ್ಲಿರುವ ಜಕ್ಕೂರು ಬಳಿಯ ಕೃಷ್ಣ ರೆಸ್ಟೋರೆಂಟ್ ಹತ್ತಿರದ ಮರಕ್ಕೆ ಇಬ್ಬರು ಅಕ್ಕತಂಗಿಯರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೃತ ಯುವತಿಯರನ್ನು ನೇಪಾಳ ಮೂಲದ ಸಿರ್ಜನಾ (22) ಹಾಗೂ ರಿತಾ (23) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಸ್ಸಾಂ ಮೂಲದವರು ಎಂದು ಮೊದಲು ಶಂಕಿಸಲಾಗಿತ್ತಾದರೂ, ನಂತರ ಇಬ್ಬರು ನೇಪಾಳದವರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಸದ್ಯ ಇವರು ಬೆಂಗಳೂರಿನಲ್ಲಿ ಏನು ಕೆಲಸ ಮಾಡುತ್ತಿದ್ದರು, ಎಲ್ಲಿ ವಾಸವಿದ್ದರೂ ಎಂಬುದು ಇನ್ನು ತಿಳಿದು ಬಂದಿಲ್ಲ.
ಇದನ್ನು ಕಂಡು ಆತಂಕಕ್ಕೊಳಗಾದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದೇ ಮರಕ್ಕೆ ಇಬ್ಬರು ಯುವತಿಯರು ಅಸಹಜ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಮಾಹಿತಿ ಬರ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
