ಕೊಪ್ಪಳ ಜು.22: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಅಡಿ ದೊರಕುವ ರೂ.2000 ತನ್ನ ಪತ್ನಿಗೆ ಬಂದಿಲ್ಲ ಎಂದು ಪತಿಯೊಬ್ಬರು ಜಿಲ್ಲಾಡಳಿತ ಭವನದ ಮುಂದೆ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿರುವ ಕುರಿತು ವರದಿಯಾಗಿದೆ.

ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಯೋಜನೆ ಜಾರಿಯಾದಾಗಿನಿಂದ ಶಿಲ್ಪಾ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗಿಲ್ಲ. ಇದರಿಂದ ಬೇಸತ್ತ ಪತಿ ಶರಣಪ್ಪ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಹಣ ಪಡೆಯಲು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಕಚೇರಿಗಳಿಗೆ ಅಲೆದಾಡಿದ್ದಾರೆ. ಈ ಅಲೆದಾಟಕ್ಕೆ ಅವರು ಇದುವರೆಗೆ ಬರೋಬ್ಬರಿ ರೂ.25,000 ಖರ್ಚು ಮಾಡಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಫಲ ಸಿಗದಿದ್ದಾಗ, ತಾನು ಖರ್ಚು ಮಾಡಿ ರೂ.25000 ಹಣ ಸರಕಾರ ವಾಪಸ್ ನೀಡಲಿ ಎಂದು ಅವರು ಮುಖ್ಯಮಂತ್ರಿಗಳು ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
