ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ 14ನೇ ಆರೋಪಿ (A-14) ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸಂಪೂರ್ಣ ಸತ್ಯವನ್ನು ಹೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎನ್ನುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾನೆ.

ಹೌದು, ಆರೋಪಿ ಪ್ರದೋಷ್, ಈ ಪ್ರಕರಣದಲ್ಲಿ ಕ್ಷಮಾದಾನ ನೀಡಿ, ಮಾಫಿ ಸಾಕ್ಷಿಯನ್ನಾಗಿ (Approver) ಪರಿಗಣಿಸುವಂತೆ ಕೋರಿ ಆತ ಬೆಂಗಳೂರಿನ 59ನೇ ಸಿಸಿಎಚ್ (CCH) ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾನೆ. ಈ ನಡೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಹಂತದಲ್ಲಿ ಅತ್ಯಂತ ಪ್ರಮುಖ ತಿರುವು ಎನ್ನಲಾಗಿದೆ.
ಇನ್ನೂ ಅರ್ಜಿಯ ಜೊತೆಗೆ ಪ್ರದೋಷ್ ಪರ ವಕೀಲರು ನ್ಯಾಯಾಲಯಕ್ಕೆ ಮತ್ತೊಂದು ಪ್ರಮುಖ ಮನವಿಯನ್ನು ಸಲ್ಲಿಸಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಇರುವ ಕೊಠಡಿಯಿಂದ ತನ್ನನ್ನು ಬೇರ್ಪಡಿಸಿ, ಪ್ರತ್ಯೇಕ ಜೈಲು ಕೊಠಡಿಯಿಂದ ಕೋರ್ಟ್ಗೆ ಹಾಜರುಪಡಿಸಬೇಕು ಎಂದು ಕೋರಿದ್ದಾರೆ. ದರ್ಶನ್ ಅವರ ಪ್ರಭಾವ ಅಥವಾ ಬೆದರಿಕೆಯ ಭಯದಿಂದ ಮುಕ್ತಿ ಪಡೆದು, ಸ್ವತಂತ್ರವಾಗಿ ಕೋರ್ಟ್ ಎದುರು ಸತ್ಯ ಹೇಳಲು ಈ ಮನವಿ ಮಾಡಲಾಗಿದೆ ಎನ್ನಲಾಗಿದೆ.
ಪ್ರದೋಷ್ ಸಲ್ಲಿಸಿರುವ ಈ ಆಘಾತಕಾರಿ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು, ಈ ವಿಷಯದಲ್ಲಿ ರಾಜ್ಯ ಸರಕಾರಿ ಅಭಿಯೋಜಕರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಸೂಚನೆ ನೀಡಿದೆ.

