Home » ಪುತ್ತೂರಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟವರ ಆತ್ಮಗಳಿಗೆ ಇಂದು ‘ಪ್ರೇತ ವಿವಾಹ’!!

ಪುತ್ತೂರಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟವರ ಆತ್ಮಗಳಿಗೆ ಇಂದು ‘ಪ್ರೇತ ವಿವಾಹ’!!

0 comments

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಒಂದು ಅಪರೂಪದ ಘಟನೆ ಒಂದು ಬೆಳಕಿಗೆ ಬಂದಿದ್ದು ಸುಮಾರು 25 ವರ್ಷಗಳ ಹಿಂದೆ ಮೃತಪಟ್ಟ ಜೋಡಿಗಳ ಪ್ರೇತಗಳಿಗೆ ಇಂದು ಮದುವೆ ಮಾಡಿ ದೋಷ ನಿವಾರಣೆ ಮಾಡಿಕೊಳ್ಳಲಾಗಿದೆ.

ಪ್ರೇತಗಳನ್ನು ಮದುವೆ ಮಾಡಿಸುವುದು ತುಳುನಾಡಿನ ಆಚರಣೆಗಳಲ್ಲಿ ಒಂದಾಗಿದೆ. ಇದೀಗ ಈ ಪ್ರೇತಗಳ ಮದುವೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆಡಿದೆ. ಹಲವು ವರ್ಷಗಳ ಹಿಂದೆ ಮೃತಪಟ್ಟ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿವಾಹವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಗಿದೆ.

ಮದುವೆ ನಡೆಸಲು ಕಾರಣ?

ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದ್ದವು. ಕುಟುಂಬದ ಕಷ್ಟಗಳಿಗೆ ಕಾರಣವೇನು ಎಂದು ಅರಿಯಲು ಜ್ಯೋತಿಷಿಗಳ ಸಲಹೆಯಂತೆ ‘ಪ್ರಶ್ನಾ ಚಿಂತನೆ’ ನಡೆಸಿದಾಗ ಮದುವೆಯಾಗದೆ ಮೃತಪಟ್ಟ ಆನಂದನ ಆತ್ಮ ಅತೃಪ್ತವಾಗಿದೆ. ಹೀಗಾಗಿ ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಆತ್ಮಕ್ಕೆ ಮದುವೆ ಮಾಡಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಜ್ಯೋತಿಷ್ಯರು ತಿಳಿಸಿದ್ದರು. ಜ್ಯೋತಿಷ್ಯರು ಹೇಳಿದಂತೆ ಹಿರಿಯರೆಲ್ಲರೂ ಕೂತು ಮಾತನಾಡಿ, ಆನಂದನ ಆತ್ಮಕ್ಕೆ ಮದುವೆ ಮಾಡಿಸುವುದಾಗಿ ನಿರ್ಧರಿಸಿದರು. ಅದರಂತೆ ಆನಂದರವರ ಕುಟುಂಬದಲ್ಲೇ ಸೋದರ ಸಂಬಂಧದಲ್ಲಿ ಮಾವನ ಮಗಳು ಸರೋಜಾ ಅವರೊಂದಿಗೆ ಆನಂದರವರ ವಿವಾಹವನ್ನು ಮಾಡಲಾಯಿತು.

banner

ಸರೋಜರವರು ಮುಂಡೂರು ಬದಿಯಡ್ಕ ಮುತ್ತಪ್ಪ ಮತ್ತು ದೇವಕಿಯವರ ಪುತ್ರಿಯಾಗಿದ್ದು ಇವರೂ ಕೂಡಾ ಎಳವೆಯಲ್ಲೇ ನಿಧನ ಹೊಂದಿದ್ದರು. ಇಬ್ಬರೂ ನಿಧನಹೊಂದಿ ಸುಮಾರು 25 ವರ್ಷಗಳ ಕಳೆದಿವೆ. ಈ ಎರಡೂ ಆತ್ಮಗಳಿಗೂ ವಿವಾಹದ ಮುಕ್ತಿ ಕೊಡುವ ಮೂಲಕ ಅವರಿಬ್ಬರ ಕುಟುಂಬದಲ್ಲೂ ಕಂಡು ಬರುತ್ತಿದ್ದ ದೋಷಗಳಿಗೆ ಮುಕ್ತಿ ನೀಡಲಾಯಿತು. 

 ಈ ಪ್ರೇತ ವಿವಾಹದ ಬಗ್ಗೆ ಕುಟುಂಬ ಸದಸ್ಯರು ಒಬ್ಬರು ಮಾತನಾಡಿ “ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕಾರ ಮತ್ತು ಆಚರಣೆಗಳು ಕೇವಲ ಮೌಡ್ಯವಲ್ಲ, ಅವುಗಳ ಹಿಂದೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸತ್ಯಗಳಿವೆ. ಜ್ಯೋತಿಷ್ಯದ ಮೂಲಕ ಕಂಡುಬಂದ ದೋಷವನ್ನು ಶಾಸ್ರೋಕ್ತವಾಗಿ ಪರಿಹರಿಸುವ ಮೂಲಕ ನಮ್ಮ ಕುಟುಂಬಕ್ಕೆ ನೆಮ್ಮದಿ. ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ನಮ್ಮದು” ಎಂದು ತಿಳಿಸಿದ್ದಾರೆ. 

ಇನ್ನೂ ವಿವಾಹದ ಬಳಿಕ ನೆಂಟರಿಷ್ಟರಿಗೆ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮುಂಡೂರು ಬಾರಿಕೆಯಲ್ಲಿ ನಡೆದ ಈ ವಿಶಿಷ್ಟ ಮದುವೆ ಸಮಾರಂಭವು ಧಾರ್ಮಿಕ ವಿಧಿವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಪ್ರೇತ ವಿವಾಹದಲ್ಲಿ ಅಪಾರ ಅನುಭವ ಇರುವ ಧರ್ಮಪಾಲ ಶೇಣಿ ಅವರು ಈ ವಿವಾಹದ ಪೌರೋಹಿತ್ಯವನ್ನು ವಹಿಸಿದ್ದರು. ಧರ್ಮಪಾಲ ಶೇಣಿಯವರ ಮಾರ್ಗದರ್ಶನದಲ್ಲಿ ಶಾಸ್ತೋಕ್ತವಾಗಿ ಎಲ್ಲಾ ವಿವಾಹ ವಿಧಿಗಳು ಜರುಗಿದವು. ಕುಟುಂಬದ ಸದಸ್ಯರು ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ಪಾಲ್ಗೊಂಡು, ಹಿರಿಯರ ಆಶಯವನ್ನು ಪೂರೈಸಿದರು.

You may also like