ಬೆಳ್ತಂಗಡಿ: ಎಸ್ಐಆರ್ ಕೆಲಸದ ನಿಮಿತ್ತ ಮನೆಗೆ ಬಂದಿದ್ದ ದಲಿತ ಮಹಿಳಾ ಬಿಎಲ್ಒ ಅವರಿಗೆ ಮನೆ ಪ್ರವೇಶ ನಿರಾಕರಣೆ ಮಾಡಿ, ಜಾತಿ ನಿಂದನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಘಟನೆಗೆ ಕುರಿತಂತೆ ಆರೋಪಿ ಮಹಿಳೆಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 6 ರ ಬೆಳಗ್ಗೆ 11.30 ರ ಸುಮಾರಿಗೆ ಎ.ಎಲ್.ಒ ಮಾಧವ ಎನ್ನುವವರ ಜೊತೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಮಹಿಳಾ ಬಿಎಲ್ಒ, ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವವರ ಮನೆಗೆ ಹೋಗಿದ್ದರು. ಆಗ ಆರೋಪಿ ಯಶೋಧ ಆಚಾರಿ, ಮಹಿಳಾ ಬಿಎಲ್ಒನನ್ನು ಉದ್ದೇಶಿಸಿ, ʼನೀನು ಅಲ್ಲಿಯೇ ನಿಲ್ಲು, ನಿಮ್ಮ ಜಾತಿಯವರು ಇಲ್ಲಿಗೆ ಬರುವಂತಿಲ್ಲ, ನೀವು ಅಲ್ಲಿಯೇ ನಿಲ್ಲಬೇಕುʼ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮನೆಯ ಸಿಟ್ಔಟ್ ಪ್ರವೇಶ ಮಾಡಲು ಬಿಡದೆ, ಮೆಟ್ಟಿಲ ಬಳಿಯೇ ತಡೆದು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳಾ ಬಿಎಲ್ಒ ತನ್ನ ಮೇಲೆ ನಡೆದ ಜಾತಿ ನಿಂದನೆ, ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಕುರಿತಂತೆ ಜು.7 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ಯಶೋಧ ಆಚಾರಿ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

