ಚನ್ನಪಟ್ಟಣ ತಹಸೀಲ್ದಾರ್ ಬಿ.ಎನ್. ಗಿರೀಶ್ ಮೇಲೆ ಅವರ ಸರ್ಕಾರಿ ನಿವಾಸದಲ್ಲಿಯೇ ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೂವರು ದುಷ್ಕರ್ಮಮಿಳು ತಮ್ಮನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ, ಅದನ್ನು ವಿಡಿಯೋ ಮಾಡಿಕೊಂಡು ಹಣಕ್ಕೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಅಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚನ್ನಪಟ್ಟಣ ನಗರದ ಕುವೆಂಪುನಗರದ 7ನೇ ಅಡ್ಡರಸ್ತೆಯಲ್ಲಿರುವ ತಹಸೀಲ್ದಾರ್ ವಸತಿಗೃಹದಲ್ಲಿ ಜೂನ್ 29ರಂದು ಈ ಕೃತ್ಯ ನಡೆದಿದೆ. ಮೈಸೂರು ಮೂಲದ ರೌಡಿಶೀಟರ್ ಅನುಷ್, ಶೋಭರಾಜ್ ಮತ್ತು ನವೀನ್ ಎಂಬುವರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ತಹಶೀಲ್ದಾರ್ ಗಿರೀಶ್ ಅವರಿಗೆ ಜ್ಯೂಸ್ನಲ್ಲಿ ಮದ್ಯ ಬೆರೆಸಿ ಕುಡಿಸಿ ಪ್ರಜ್ಞಾಹೀನರನ್ನಾಗಿಸಿದ್ದಾರೆ. ನಂತರ ಅವರನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು 10 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಅಲ್ಲದೆ, ಅವರ 8 ಗ್ರಾಂ ಚಿನ್ನದ ಉಂಗುರ ಮತ್ತು 14 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಎನ್ನಲಾಗಿದೆ.
ತಹಶೀಲ್ದಾರ್ ಗಿರೀಶ್ ಸದ್ಯ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಅನುಷ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಚಾಮರಾಜ ನಗರ ಜಿಲ್ಲೆಯವನಾದ ಅನುಷ್ (33) ಜಿಮ್ ತರಬೇತುದಾರನಾಗಿ ಮೈಸೂರಿನಲ್ಲಿ ನೆಲೆಸಿದ್ದ. ಈತನ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ರಾಷ್ಟ್ರೀಯ ಶಿವಶಕ್ತಿ ಸೇನಾ ಪಡೆ ಸಂಸ್ಥಾಪಕ ಅಧ್ಯಕ್ಷನಾಗಿದ್ದ ಈತನ ವಿರುದ್ಧ ಹೊಡೆದಾಟ ಸೇರಿ ಕೆಲ ಪ್ರಕರಣಗಳು ದಾಖಲಾಗಿವೆ.
