ಬೆಳಗಾವಿ: ಭಕ್ತರು ದೇವರ ಬಳಿ ಆರೋಗ್ಯ, ಉದ್ಯೋಗ, ಮದುವೆ, ಮಕ್ಕಳ ವಿದ್ಯಾಭ್ಯಾಸ ಕುರಿತು ಸೇರಿ ತಮ್ಮ ಅನೇಕ ಮನೋಭಿಲಾಷೆಗಳಿಗೆ ಹರಕೆ ಸಲ್ಲಿಸುವುದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತನೊಬ್ಬ ಬರೆದ ವಿಚಿತ್ರ ಹರಕೆ ಪತ್ರ ನಿಜಕ್ಕೂ ಆಶ್ಚರ್ಯಗೊಳಿಸಿದೆ.

ಮಠದ ಹುಂಡಿಯಲ್ಲಿದ್ದ ಕಾಣಿಕೆಗಳನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಈ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ಯುವಕನೋರ್ವ “ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು, ಆಕೆಯ ಕಾಟದಿಂದ ತಪ್ಪಿಸು” ಎಂದು ಮನವಿ ಮಾಡಿದ್ದಾನೆ. ಇದು ಅಲ್ಲಿನ ಸಿಬ್ಬಂದಿ ಮತ್ತು ಭಕ್ತರ ಮುಖದಲ್ಲಿ ನಗು ಮೂಡಿಸಿದೆ. ಈ ವಿಚಿತ್ರ ಹರಕೆಯ ವಿಷಯ ಈಗ ಸ್ಥಳೀಯರಲ್ಲೂ ಕುತೂಹಲಕ್ಕೂ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
