ಇಲ್ಲೊಬ್ಬ ಆಸಾಮಿ ನನಗೆ ಈಗ ನನ್ನ ಹೆಂಡ್ತಿ ಮೇಲೆ ಇನ್ಟ್ರೆಸ್ಟ್ ಇಲ್ಲ ಎಂದು ಡಿವೋರ್ಸ್ ಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಕಾರಣ ಕೇಳಿದ ಹೈಕೋರ್ಟ್ ಖಡಕ್ ಆದೇಶವನ್ನು ನೀಡಿದೆ.

ವ್ಯಕ್ತಿಯೋರ್ವ ತನ್ನ ಸಂಗಾತಿ ಮೇಲೆ ಆಸಕ್ತಿ ಕಳೆದುಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ವಿವಾಹ ವಿಚ್ಛೇದನ ಕೋರಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ತಿರಸ್ಕರಿಸಿದ್ದ ಮೈಸೂರಿನ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶವನ್ನು ನೀಡಿದೆ.
ಹಿಂದೂ ಧರ್ಮದ ಕಾನೂನಿಡಿಯಲ್ಲಿ ಮದುವೆ ಒಂದು ಸಂಸ್ಕಾರ ಅದು ಒಪ್ಪಂದವಲ್ಲ. ಪತಿ ಮತ್ತು ಪತ್ನಿ ಮದುವೆಯಾದ ನಂತರ ಜೊತೆಯಾಗಿ ಜೀವನ ಸಾಗಿಸಬೇಕು. ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲವೆನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರೇಮ ವಿವಾಹವಾಗಿ, ವಯಸ್ಕ ಹೆಣ್ಣು ಮಗುವಿಗೆ ತಂದೆಯಾಗಿ, ನಂತರ ನ್ಯಾಯಾಲಯದ ಮುಂದೆ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿ ಪತಿ ತನ್ನ ತಪ್ಪಿನ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಕೋರ್ಟ್ ಹೇಳಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆದೇಶವನ್ನು ಕೋರ್ಟ್ ನೀಡಿದೆ.

