ಕಡಬ: ಉಪ್ಪಿನಂಡಿಗೆ ಕೆಲಸಕ್ಕೆ ಹೋಗಿ ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಕಡಬ ಕಳಾರ ನಿವಾಸಿ ಮಹಮ್ಮದ್ ಅಕ್ಬರ್ (21) ಅವರು ಕೊನೆಗೂ ಮನೆಗೆ ಮರಳಿದ್ದಾರೆ. ತಮ್ಮ ತಂದೆಯೊಂದಿಗೆ ಕಡಬ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಹಿಂಪಡೆಯುವಂತೆ ವಿನಂತಿ ಮಾಡಿದ್ದಾರೆ.

ವಿಚಾರಣೆ ಸಂದರ್ಭ ಮಾತನಾಡಿದ ಮಹಮ್ಮದ್ ಅಕ್ಬರ್ ನಾನು ಕಾಣೆಯಾಗಿರಲಿಲ್ಲ, ಉಪ್ಪಿನಂಗಡಿಯ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ಅಲ್ಲಿ ಸಂಪಾದನೆ ಕಡಿಮೆಯಿದ್ದ ಕಾರಣ ಹೆಚ್ಚು ಸಂಬಳ ಸಿಗುವ ಕೆಲಸ ಹುಡುಕಲು ಯಾರಿಗೂ ತಿಳಿಸದೆ ಜುಲೈ 16 ರಂದು ಬೆಂಗಳೂರಿಗೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೋಗುವಾಗ ಬಟ್ಟೆ, ಶೈಕ್ಷಣಿಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದ ಅಕ್ಬರ್ ಬೆಂಗಳೂರಿನಲ್ಲಿ ಸೂಕ್ತ ಕೆಲಸ ಸಿಗದ ಕಾರಣ ಜುಲೈ 19 ರಂದು ಅಲ್ಲಿಂದ ರೈಲು ಹತ್ತಿ ಜುಲೈ 20 ರ ಬೆಳಿಗ್ಗೆ ಕಡಬಕ್ಕೆ ವಾಪಸ್ ಆಗಿದ್ದಾರೆ. ಮನೆಗೆ ಬಂದ ನಂತರ ತನ್ನ ನಾಪತ್ತೆ ಕುರಿತು ತಂದೆ ಅಬ್ದುಲ್ ರಶೀದ್ ಅವರು ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದು ಬಂದಿದೆ.
ತಂದೆಗೆ ತಿಳಿಸದೆ ಹೋಗಿದ್ದು ತಪ್ಪು, ಇನ್ನು ಮುಂದೆ ಎಲ್ಲಿಗೂ ಹೋಗುವುದಿಲ್ಲ ಎಂದು ಪೊಲೀಸರಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

