ಸರ್ಕಾರದ ಉನ್ನತ ಹುದ್ದೆ ಸಿಕ್ಕ ತಕ್ಷಣ ಐಷಾರಾಮಿ ಜೀವನ, ಸರ್ಕಾರಿ ಬಂಗಲೆ, ವಿಐಪಿ ಕಾರು ಹಾಗೂ ವಿಶೇಷ ಸೌಲಭ್ಯಗಳನ್ನ ಬಯಸುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ್ ಕುಮಾರ್ ದ್ವಿವೇದಿ ಅತ್ಯಂತ ಸರಳ ಜೀವನ ನಡೆಸುತ್ತಾ ದೇಶಕ್ಕೆ ಮಾದರಿಯಾಗಿದ್ದಾರೆ.

ಹೌದು, ಅಕ್ಷಯ್ ಕುಮಾರ್ ದ್ವಿವೇದಿ ಅವರು ಸರ್ಕಾರಿ ಬಂಗಲೆ, ವಿಐಪಿ ಕಾರು ಏನೂ ಬೇಡ, ಸಂಬಳವನ್ನೇ ಅರ್ಧಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ದೊರೆಯುವ ಬಂಗಲೆ, ಅಧಿಕೃತ ವಾಹನ, ಭದ್ರತೆ ಸೇರಿದಂತೆ ಹಲವು ಸೌಲಭ್ಯಗಳನ್ನ ಬಳಸಿಕೊಳ್ಳುವ ಅವಕಾಶವಿದ್ದರೂ, ಅವುಗಳನ್ನ ಅವರು ಸ್ವಯಂಪ್ರೇರಿತವಾಗಿ ನಿರಾಕರಿಸಿದ್ದಾರೆ. ಸದ್ಯ ಅವರು ಸರಳವಾದ ಒಂದು ಕೊಠಡಿಯಲ್ಲಿ ವಾಸವಾಗಿದ್ದು, ತಮ್ಮ ಅಡುಗೆಯನ್ನ ತಾವೇ ಮಾಡಿಕೊಂಡು ಅತ್ಯಂತ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಪ್ರತಿದಿನ ಯಾವುದೇ ಆಡಂಬರವಿಲ್ಲದೆ ನಡೆದುಕೊಂಡೇ ನ್ಯಾಯಾಲಯಕ್ಕೆ ತೆರಳುತ್ತಾರೆ. ಅಲ್ಲದೆ ತಮ್ಮ ಸಂಬಳವನ್ನ ಅರ್ಧಕ್ಕೆ ಇಳಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಅಕ್ಷಯ್ ಕುಮಾರ್ ಅವರ ವೈಯಕ್ತಿಕ ಜೀವನವೂ ಅಷ್ಟೇ ಸರಳವಾಗಿದೆ. ಅವರ ಬಳಿ ಯಾವುದೇ ದುಬಾರಿ ಆಸ್ತಿ ಅಥವಾ ಐಷಾರಾಮಿ ವಸ್ತುಗಳಿಲ್ಲ ಎಂದು ಹೇಳಲಾಗುತ್ತಿದೆ. ಅವರ ತಾಯಿ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ಸಾಮಾನ್ಯ ಮೊಬೈಲ್ ಫೋನ್ಅನ್ನೇ ತಮ್ಮ ವೈಯಕ್ತಿಕ ಆಸ್ತಿ ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಜೀವನಪೂರ್ತಿ ಮದುವೆಯಾಗದೆ ಸಮಾಜ ಸೇವೆಗೆ ತಮ್ಮನ್ನ ಸಮರ್ಪಿಸಿಕೊಳ್ಳುವ ನಿರ್ಧಾರವನ್ನೂ ಅವರು ತೆಗೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ನ್ಯಾಯಾಧೀಶರಾಗುವ ಅವರ ಕನಸಿನ ಹಿಂದೆಯೂ ಒಂದು ಭಾವನಾತ್ಮಕ ಕಥೆಯಿದೆ. ಬಾಲ್ಯದಲ್ಲಿ ಆಸ್ತಿ ವಿವಾದದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅವರ ತಾಯಿ ವರ್ಷಗಳ ಕಾಲ ನ್ಯಾಯಾಲಯದ ಸುತ್ತ ಅಲೆದಾಡಿ ಅನುಭವಿಸಿದ ಸಂಕಷ್ಟವನ್ನ ಅವರು ಕಣ್ಣಾರೆ ಕಂಡಿದ್ದರು. ಇದೇ ಅನುಭವ ಅವರನ್ನ ನ್ಯಾಯಾಧೀಶರಾಗಲು ಪ್ರೇರೇಪಿಸಿತು ಎನ್ನಲಾಗಿದೆ.

