ದೇಶದ ರಾಷ್ಟ್ರಗೀತೆ (ಜನ ಗಣ ಮನ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಯನ್ನು ಹಾಡುವ ಹಾಗೂ ನುಡಿಸುವ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಹೊಸದಾಗಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ವಂದೇ ಮಾತರಂಗೆ ಅವಮಾನಿಸಿದರೆ ಕಠಿಣ ಶಿಕ್ಷೆ ನೀಡಲು ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ.

ಹೌದು, ರಾಷ್ಟ್ರಗೀತೆ ಜನ ಗಣ ಮನಗೆ ಪ್ರಸ್ತುತ ಲಭ್ಯವಿರುವ ಕಾನೂನು ರಕ್ಷಣೆಯನ್ನು ರಾಷ್ಟ್ರೀಯ ಗೀತೆ ವಂದೇ ಮಾತರಂಗೂ ವಿಸ್ತರಿಸುವ ಉದ್ದೇಶದಿಂದ, 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಗೆ ಪ್ರಮುಖ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಸ್ತಾಪಿತ ವಂದೇ ಮಾತರಂ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಂಡಿಸಲು ನಿರ್ಧರಿಸಿದ್ದು, ಈ ಕಾಯ್ದೆ ಅಂಗೀಕಾರಗೊಂಡರೆ, ವಂದೇ ಮಾತರಂ ಗೀತೆಗೆ ನೀಡುವ ಉದ್ದೇಶಪೂರ್ವಕ ಅವಮಾನವು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ. ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ವರ್ಷಪೂರ್ತಿ ಆಚರಣೆಯ ಭಾಗವಾಗಿ ಸರ್ಕಾರವು ಈ ಮಸೂದೆಯನ್ನು ತರುತ್ತಿದೆ.
ವಂದೇ ಮಾತರಂಗೆ ಅವಮಾನ ಮಾಡಿದರೆ ಶಿಕ್ಷೆ ಏನು?
ಪ್ರಸ್ತಾಪಿತ ಕಾನೂನಿನ ಅಡಿಯಲ್ಲಿ, ವಂದೇ ಮಾತರಂ ಗೀತೆಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಅದನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಯಾರೇ ಆದರೂ ಈ ಕೆಳಗಿನ ಶಿಕ್ಷೆಯನ್ನು ಎದುರಿಸಬೇಕಾಗಬಹುದು
3 ವರ್ಷಗಳವರೆಗೆ ಜೈಲು ಶಿಕ್ಷೆ
ದಂಡ
ಜೈಲು ಶಿಕ್ಷೆ ಮತ್ತು ದಂಡ ಎರಡೂ ಅನ್ವಯಿಸಲಿದೆ
ಗಾಯನಕ್ಕೆ ಇರುವ ಮಾರ್ಗಸೂಚಿಗಳು:
ಇದನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕು.
ಅಧಿಕೃತ ಕಾರ್ಯಕ್ರಮಗಳು ಪ್ರಾರಂಭವಾಗುವ ಮೊದಲು ಇದನ್ನು ಪ್ರದರ್ಶಿಸಬೇಕು.
ಎಲ್ಲಾ ಆರು ಚರಣಗಳನ್ನು ಹಾಡಬೇಕು.
ಸಂಪೂರ್ಣ ಗಾಯನವು ಸುಮಾರು 3 ನಿಮಿಷ 10 ಸೆಕೆಂಡುಗಳನ್ನು ತೆಗೆದುಕೊಳ್ಳಬೇಕು.
ಅದನ್ನು ಹಾಡುವಾಗ ಜನರು ಅಟೆನ್ಶನ್ (ಸಾವಧಾನ) ಭಂಗಿಯಲ್ಲಿ ನಿಲ್ಲಬೇಕು.
ಶಾಲೆಗಳು ಬೆಳಗಿನ ಪ್ರಾರ್ಥನೆಗೆ ಮೊದಲು ವಂದೇ ಮಾತರಂ ಅನ್ನು ಪ್ಲೇ ಮಾಡಬೇಕು ಅಥವಾ ಹಾಡಬೇಕು.

