Puri Jagannath: ವಿಶ್ವವಿಖ್ಯಾತ ಪುರಿ ಜಗನ್ನಾಥನ ರಥಯಾತ್ರೆ ದೇಶದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು. ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ನಡೆಯುವ ರಥೋತ್ಸವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇತ್ತೀಚಿನ ದಿನಗಳಲ್ಲಿ ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥಯಾತ್ರೆಯ ಈ ಹಬ್ಬವನ್ನು ಇಡೀ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಇಲ್ಲಿನ ಜಗನ್ನಾಥ ದೇವರು ಸೇರಿದಂತೆ ಬಲಬದ್ರ ಹಾಗೂ ಸುಭದ್ರಾ ಮೂರ್ತಿಗಳಿಗೆ ಕೈಕಾಲುಗಳಿಲ್ಲದಿರುವುದು. ಅಂದರೆ ಇಲ್ಲಿ ಅಪೂರ್ಣವಾದ ದೇವರ ಮೂರ್ತಿಗಳನ್ನು ಪೂಜೆ ಮಾಡಲಾಗುತ್ತದೆ. ಹಾಗಿದ್ದರೆ ಈ ಮೂರ್ತಿಗಳಿಗೆ ಕೈಕಾಲುಗಳು ಏಕೆ ಇಲ್ಲ? ಪೂರ್ಣಮೂರ್ತಿಗಳ ವಿಶೇಷತೆ ಏನು?

ಅಪೂರ್ಣ ವಿಗ್ರಹಗಳ ವಿಶೇಷತೆ ಏನು?
ಈ ಪುರಿ ದೇಗುಲವನ್ನು ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ಜಗನ್ನಾಥನೊಂದಿಗೆ ಸಹೋದರಿ ಸುಭದ್ರಾ ಮತ್ತು ಸಹೋದರ ಬಲರಾಮ ಕೂಡ ಈ ಸ್ಥಳದಲ್ಲಿ ವಾಸವಾಗಿದ್ದಾರೆ. ಆದರೆ ಇಲ್ಲಿನ ವಿಗ್ರಗಳು ಅಪೂರ್ಣವಾದವು. ಅಂದರೆ ಸಂಪೂರ್ಣವಾಗಿ ಕೆತ್ತಲಾಗಿಲ್ಲ.
ಪುರಾಣಗಳ ಪ್ರಕಾರ,ಭಗವಾನ್ ವಿಷ್ಣುವಿನ ಪರಮ ಭಕ್ತನಾಗಿದ್ದ ರಾಜ ಇಂದ್ರದ್ಯುಮ್ನ, ನೀಲ ಮಾಧವನ ರೂಪದಲ್ಲಿ ಆರಾಧಿಸಲ್ಪಡುತ್ತಿದ್ದ ದೇವರಿಗಾಗಿ ಭವ್ಯವಾದ ದೇವಾಲಯವನ್ನು ನಿರ್ಮಿಸಲು ನಿರ್ಧರಿಸುತ್ತಾನೆ. ದೇವರ ವಿಗ್ರಹವನ್ನು ಕೆತ್ತಲು, ಸ್ವತಃ ದೇವಶಿಲ್ಪಿ ವಿಶ್ವಕರ್ಮನು ವೃದ್ಧ ಬಡಗಿಯ ರೂಪದಲ್ಲಿ ಅಲ್ಲಿಗೆ ಬರುತ್ತಾನೆ. ಪ್ರತಿಮೆಯನ್ನು ತಯಾರಿಸುವ ಮೊದಲು, ದೇವ ಶಿಲ್ಪಿ ವಿಶ್ವಕರ್ಮರು ರಾಜ ಇಂದ್ರದ್ಯುಮ್ನನ ಮುಂದೆ ವಿಗ್ರಹಗಳನ್ನು ತಯಾರಿಸೋ ಸ್ಥಳಕ್ಕೆ ಯಾರೂ ಬರಬಾರದು, ಯಾರಾದರೂ ಒಳಗೆ ಬಂದರೆ, ವಿಗ್ರಹಗಳನ್ನು ನಿರ್ಮಾಣ ನಿಲ್ಲಿಸಲಾಗುತ್ತೆ ಎಂದು ಷರತ್ತು ವಿಧಿಸಿದ್ದರಂತೆ. ಬೇಗನೆ ವಿಗ್ರಹಗಳನ್ನ ನೋಡುವ ಹಂಬಲದಲ್ಲಿದ್ದ ರಾಜನು ತಕ್ಷಣವೇ ಭಗವಾನ್ ವಿಶ್ವಕರ್ಮನ (Vishwakarma) ಮಾತುಗಳನ್ನು ಒಪ್ಪಿಕೊಂಡನು.
ಇದರ ನಂತರ, ವಿಶ್ವಕರ್ಮ ಆ ವಿಗ್ರಹಗಳನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದರು. ವಿಶ್ವಕರ್ಮರು ಮಾಡುತ್ತಿದ್ದ ಈ ದೈವೀಕ ಕಾರ್ಯದ ಶಬ್ಧ ಬಾಗಿಲಿನ ಹೊರಗೂ ಕೇಳಿಸುತ್ತಿತ್ತು, ಆ ಶಬ್ಧವನ್ನು ರಾಜನು ಪ್ರತಿದಿನ ಕೇಳಿ ತೃಪ್ತನಾಗುತ್ತಿದ್ದನು, ಆದರೆ ಒಂದು ದಿನ ಇದ್ದಕ್ಕಿದ್ದಂತೆ ಶಬ್ಧವೇ ಬರೋದು ನಿಂತು ಹೋಯಿತಂತೆ. ಇದರಿಂದಾಗಿ ರಾಜ ಇಂದ್ರದ್ಯುಮ್ನನು ವಿಗ್ರಹಗಳ ಕಾರ್ಯ ಪೂರ್ಣಗೊಂಡಿರಬಹುದು, ಹಾಗಾಗಿ ಶಬ್ಧ ಬರುತ್ತಿಲ್ಲ ಎಂದು ಅಂದುಕೊಂಡನು. ಈ ತಪ್ಪು ತಿಳುವಳಿಕೆಯಲ್ಲಿ, ಅವರು ಬಾಗಿಲು ತೆರೆದರು, ಷರತ್ತು ಪ್ರಕಾರ, ಬಾಗಿಲು ತೆರೆದ ಕೂಡಲೇ, ವಿಶ್ವಕರ್ಮ ದೇವರು ಅಲ್ಲಿಂದ ಕಣ್ಮರೆಯಾದರು, ಆದರೆ ಪ್ರತಿಮೆಗಳು ಇನ್ನೂ ಸಿದ್ಧವಾಗಿರಲಿಲ್ಲ. ಅಂದಿನಿಂದ ಈ ವಿಗ್ರಹಗಳು ಅಪೂರ್ಣವಾಗಿವೆ ಮತ್ತು ಈ ಮೂರು ವಿಗ್ರಹಗಳಿಗೆ ಕೈ ಮತ್ತು ಕಾಲುಗಳಿಲ್ಲ ಎನ್ನುತ್ತಾರೆ ಜನ.
ಶ್ರೀ ಕೃಷ್ಣನ ಹೃದಯ ಇಲ್ಲಿ ಇಂದಿಗೂ ಮಿಡಿಯುತ್ತಿದೆ
ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳ ಪ್ರಕಾರ, ಭಗವಾನ್ ಕೃಷ್ಣನ (Lord Krishna) ಹೃದಯವು ಇಂದಿಗೂ ಜಗನ್ನಾಥ ಧಾಮದಲ್ಲಿ ಮಿಡಿಯುತ್ತದೆ. ಶ್ರೀಕೃಷ್ಣ ತನ್ನ ದೇಹವನ್ನು ತ್ಯಾಗ ಮಾಡಿದಾಗ, ಅವನನ್ನು ಪಾಂಡವರು ದಹನ ಮಾಡಿದರಂತೆ. ದೇಹವನ್ನು ಸುಟ್ಟ ನಂತರವೂ, ಕೃಷ್ಣನ ಹೃದಯವು ಉರಿಯದೇ ಹಾಗೇ ಉಳಿಯಿತು, ಇದರಿಂದಾಗಿ ಪಾಂಡವರು ಹೃದಯವನ್ನ ಪವಿತ್ರ ನದಿಗೆ ಹಾಕಿದರಂತೆ.
ಶ್ರೀಕೃಷ್ಣನ ಹೃದಯವು ನೀರಿನಲ್ಲಿ ಹರಿಯುತ್ತಾ, ಮರದ ದಿಮ್ಮಿಯ ರೂಪವನ್ನು ತೆಗೆದುಕೊಂಡಿತು ಎಂದು ಹೇಳಲಾಗುತ್ತದೆ, ಇದನ್ನು ಶ್ರೀ ಕೃಷ್ಣನು ರಾಜ ಇಂದ್ರದ್ಯುಮ್ನನಿಗೆ ಕನಸಿನಲ್ಲಿ ತಿಳಿಸಿದನು, ನಂತರ ರಾಜನು ಜಗನ್ನಾಥ ಬಲಭದ್ರ ಮತ್ತು ಸುಭದ್ರಾ ವಿಗ್ರಹವನ್ನು ಮರದ ದಿಮ್ಮಿಯಿಂದ ಮಾಡುವ ನಿರ್ಮಾಣ ಕಾರ್ಯವನ್ನು ವಿಶ್ವಕರ್ಮರಿಗೆ ನಿರ್ವಹಿಸಿದರಂತೆ. ಹಾಗಾಗಿ ಇಂದಿಗೂ ಇಲ್ಲಿನ ವಿಗ್ರಹದಲ್ಲಿ ಶ್ರೀಕೃಷ್ಣನ ಹೃದಯ ಮಿಡಿಯುತ್ತಿದೆ ಎನ್ನಲಾಗುತ್ತದೆ.

