ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಎರಡು ಬಾರಿ ಸಾವನ್ನು ಗೆದ್ದಿದ್ದರು. ಗೌಡರ ಕುಟುಂಬ ಸೇರಿದಂತೆ ಇದೀಗ ನಾಡಿನ ಗಣ್ಯಾತಿಗಣ್ಯರು ಚೆನ್ನಮ್ಮನ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಇಂದು ಸಾವನ್ನಪ್ಪಿದ ಚೆನ್ನಮ್ಮ ಅವರು ಹಿಂದೆ ಎರಡು ಬಾರಿ ಸಾವನ್ನು ಗೆದ್ದಿದ್ದರು ಎಂಬುದನ್ನು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿ ಅನ್ನಿಸುತ್ತದೆ.

2001ರಲ್ಲಿ ದೇವೇಗೌಡರ ತಮ್ಮನ ಮಗನಿಂದಲೇ ಆ್ಯಸಿಡ್ ದಾಳಿಗೆ ಒಳಗಾಗಿದ್ದರು. ಆಸ್ತಿ ವಿವಾದ ಹಾಗೂ ಕುಟುಂಬದ ವೈಷಮ್ಯವೇ ಈ ದಾಳಿಗೆ ಕಾರಣವಾಗಿತ್ತು. ದೇವೇಗೌಡರ ಸಂಬಂಧಿ ಲೋಕೇಶ್ (ಬಸವೇಗೌಡರ ಮಗ) ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದ.
ದೈವಭಕ್ತರಾದ ದೇವೇಗೌಡರ ಕುಟುಂಬಕ್ಕೆ ಹರದನಹಳ್ಳಿಯ ದೇವೇಶ್ವರಸ್ವಾಮಿ ಮನೆದೇವರು. ದೇವೇಗೌಡರ ಕುಟುಂಬ ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಪೂಜೆ ಸಲ್ಲಿಸುತ್ತದೆ. ಅದರಂತೆ 2001ರ ಫೆಬ್ರವರಿ 21ರಂದು ಮನೆ ದೇವರಿಗೆ ಪೂಜೆ ಸಲ್ಲಿಸಲು ಹೋದಾಗ ಈ ಆಘಾತಕಾರಿ ಘಟನೆ ನಡೆದಿ ಕುಟುಂಬ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು.
ದೇವೇಗೌಡರು ತಮ್ಮ ಬಿಡುವಿಲ್ಲದ ಕಾರ್ಯದಲ್ಲಿ ನಿರತರಾಗಿದ್ದರಿಂದ ಚೆನ್ನಮ್ಮ ಅವರು ಪುತ್ರ ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಪೂಜೆಯಲ್ಲಿದ್ದಾಗ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್ ಎಂಬಾತ ಪೂಜೆಯ ನೆಪದಲ್ಲಿ ಬಂದು ಚೆನ್ನಮ್ಮ ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಚೆನ್ನಮ್ಮ ಅವರ ಮುಖ, ತಲೆಗೆ ಗಂಭೀರ ಗಾಯಗಳಾಗಿದ್ದರೆ, ಭವಾನಿ ರೇವಣ್ಣ ಅವರ ಕೈಗೂ ಗಾಯವಾಗಿತ್ತು. ಪ್ರಾಣಾಪಾಯದಿಂದ ಪಾರಾದ ಈ ಘಟನೆ ರಾಜಕೀಯ ಪಿತೂರಿ ಹಾಗೂ ಕೌಟುಂಬಿಕ ಕಲಹದ ಚರ್ಚೆಗೆ ಗ್ರಾಸವಾಗಿತ್ತು.
ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೊರೋನಾ ಸೋಂಕಿಗೂ ಚೆನ್ನಮ್ಮ ಅವರು ತುತ್ತಾಗಿದ್ದರು. ಅಲ್ಲದೇ, 2024-2025 ರಲ್ಲಿ ಎದೆ ಸಂಬಂಧಿತ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗೆ, ಅಪಾಯದ ಸನ್ನಿವೇಶಗಳಿಂದ ಪಾರಾಗಿ ಬಂದಿದ್ದ ಚೆನ್ನಮ್ಮ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಂಬನಿ ಮಿಡಿದಿದ್ದಾರೆ.

