ಕೆಲವು ಸಮಯದ ಹಿಂದಷ್ಟೇ ಮದುವೆ ನಿಶ್ಚಯವಾಗಿದ್ದು, ಸದ್ಯದಲ್ಲೇ ವಿವಾಹವಾಗಬೇಕಿದ್ದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಗಳಾಗಿರುವ ಈ ಯುವ ಜೋಡಿ ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಸಾವಿನ ಹಿಂದನ ಕಾರಣ ತಿಳಿದುಬಂದಿದೆ.
ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ (25) ಮೈಸೂರು ಜಿಲ್ಲೆಯ ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. . ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ಅಂದರೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಅನುಶ್ರೀ ಅವರ ನಿಶ್ಚಿತಾರ್ಥವಾಗಿರುವ ಯುವಕ ಕಣ್ಣೂರು ಮೂಲದ ವಿ. ಅಮಲ್ (26) ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅನುಶ್ರೀ ಹುಣಸೂರಿನ ಎಸ್ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಮಲ್ ಅವರು ಎರ್ನಾಕುಲಂನ ಎಂ.ಜಿ. ರೋಡ್ ಎಸ್ಬಿಐ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು.
ಮೃತ ಅನುಶ್ರೀ ಅವರು ಪಳ್ಳಿಕ್ಕರದ ಕೆ. ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿಯಾಗಿದ್ದು, ಅಮಲ್ ಅವರು ಕಣ್ಣೂರಿನ ಅಂಬಲತಟ್ಟುವಿನ ಸುಧಾಕರನ್ ಮತ್ತು ಅನಿತಾ ದಂಪತಿಯ ಪುತ್ರನಾಗಿದ್ದಾರೆ. ಕಳೆದ ಶನಿವಾರವಷ್ಟೇ ಇಬ್ಬರೂ ಕಾಸರಗೋಡಿನ ಮನೆಗೆ ಬಂದು ಭಾನುವಾರ ಸಂಜೆ ವಾಪಸ್ ತೆರಳಿದ್ದರು ಎಂದು ಸ್ಥಳೀಯರಿಂದ ತಿಳಿದು ಬಂದಿತ್ತು. ಆದರೆ ಅಷ್ಟರೊಳಗೆ ಈ ದುರಂತ ಸಂಭವಿಸಿದೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾದ ಕಾರಣ, ಭಾವಿ ಪತಿಯನ್ನು ಬೆದರಿಸಲು ಹೋಗಿ ಯುವತಿ ಅಕಸ್ಮಾತ್ತಾಗಿ ಜೀವ ಕಳೆದುಕೊಂಡಿದ್ದಾರೆ ಎಂದು ವಿವರಿಸಲಾಗಿದೆ.
ಅಷ್ಟಕ್ಕೂ ಏನಾಯಿತು?
ಮೃತ ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಶಾಖೆಯಲ್ಲಿ ಉದ್ಯೋಗಿಯಾಗಿದ್ದರೆ, ಅಮಲ್ ಎರ್ನಾಕುಲಂನ ಎಂ.ಜಿ. ರಸ್ತೆ ಎಸ್ಬಿಐ ಶಾಖೆಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 11ರ ರಾತ್ರಿ ಇಬ್ಬರೂ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಯಾವುದೋ ವಿಚಾರಕ್ಕೆ ಸಣ್ಣದಾಗಿ ಜಗಳವಾಗಿದೆ. ಇದರಿಂದ ಕೋಪಗೊಂಡ ಅನುಶ್ರೀ, ಅಮಲ್ರನ್ನು ಹೆದರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.
ಭಾವಿ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಅನುಶ್ರೀ, ಕಾಲ್ನಲ್ಲೇ ಸ್ಟೂಲ್ ಮೇಲೆ ನಿಂತು ಚೂಡಿದಾರ್ ಶಾಲನ್ನು ಫ್ಯಾನ್ಗೆ ಕಟ್ಟಿ ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್ ಸ್ಟೂಲ್ ಜಾರಿಬಿದ್ದ ಪರಿಣಾಮ ಶಾಲ್ ಬಿಗಿದುಕೊಂಡು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ. ಇದೇ ವೇಳೆ, ವಿಡಿಯೋ ಕಾಲ್ನಲ್ಲೇ ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಅಮಲ್ ತೀವ್ರ ಆಘಾತಕ್ಕೊಳಗಾಗಿ, ತಕ್ಷಣವೇ ಅನುಶ್ರೀ ತಂದೆಗೆ ವಿಷಯ ತಿಳಿಸಿದ್ದಾರೆ.
ಕುಟುಂಬಸ್ಥರು ಹುಣಸೂರಿಗೆ ಧಾವಿಸಿ ಬಂದು ನೋಡುವಷ್ಟರಲ್ಲಿ ಅನುಶ್ರೀ ಶವವಾಗಿ ಪತ್ತೆಯಾಗಿದ್ದಾರೆ. ಇತ್ತ ಪ್ರೀತಿಸಿದ ಹುಡುಗಿಯ ದುರಂತ ಅಂತ್ಯವನ್ನು ಕಣ್ಣಾರೆ ಕಂಡು ಅತೀವ ದುಃಖಕ್ಕೆ ಒಳಗಾದ ಅಮಲ್, ಎರ್ನಾಕುಲಂನ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ

