ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಹಾಗೂ ಕೇಂದ್ರ ಸರ್ಕಾರದ ಇಂಧನ ಸಚಿವಾಲಯಕ್ಕೆ ಸೇರಿದ 100 ಕೋಟಿ ರೂ.ಗೂ ಅಧಿಕ ಮೌಲ್ಯದ 32 ಗುಂಟೆ ಜಾಗವನ್ನು ಬಿಬಿಎಂಪಿ ಮಾಜಿ ಸದಸ್ಯ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿರುವುದಾಗಿ ವಾರದಿಯಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್.ಆರ್. ರಮೇಶ್, “ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ: 17/1 ರಲ್ಲಿರುವ ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ಜಾಗವನ್ನು ಪಕ್ಕದಲ್ಲೇ ಇರುವ ‘ಚೇರ್ಮನ್ ಕ್ಲಬ್’ ಒತ್ತುವರಿ ಮಾಡಿಕೊಂಡಿದೆ. ಕ್ಲಬ್ನ ಹಾಲಿ ಅಧ್ಯಕ್ಷರಾಗಿರುವ ಕೆ.ಎಂ. ಚೇತನ್ ಹಾಗೂ ಹಿಂದಿನ ಅಧ್ಯಕ್ಷರಾಗಿದ್ದ ಅವರ ತಂದೆ ಎನ್. ಮಂಜುನಾಥ್ ಈ ಕೃತ್ಯ ಎಸಗಿದ್ದು, ಕೇಂದ್ರ ಸರ್ಕಾರದ ಜಾಗದಲ್ಲಿ ‘ತೆರೆದ ಊಟದ ಪ್ರದೇಶ’ ಮತ್ತು ‘ವಾಹನ ನಿಲ್ದಾಣ’ ನಿರ್ಮಿಸಿಕೊಂಡಿದ್ದಾರೆ,” ಎಂದು ದೂರಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎನ್.ಆರ್. ರಮೇಶ್, “ನ್ಯಾಯಾಲಯಗಳ ಆದೇಶವಿದ್ದರೂ ಸಹ, ಸ್ವತಃ ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಕೇಂದ್ರ ಸರ್ಕಾರದ ಅತ್ಯಮೂಲ್ಯ ಸ್ವತ್ತನ್ನು ಕಬಳಿಸಿರುವ ಚೇರ್ಮೆನ್ ಕ್ಲಬ್ ಅಧ್ಯಕ್ಷ ಕೆ. ಎಂ. ಚೇತನ್, ಆತನ ತಂದೆ ಎನ್. ಮಂಜುನಾಥ್ ಹಾಗೂ ಇವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬೃಹತ್ ಹಗರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಸದ್ಯ ನೂರು ಕೋಟಿಗೂ ಅಧಿಕ ಬೆಲೆ ಬಾಳುವ ಜಮೀನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದಿರುವ ಎನ್ಆರ್ ರಮೇಶ್, ಕಬಳಿಕೆ ಜಾಗದಲ್ಲಿ ಪಾರ್ಕಿಂಗ್, ಪಾರ್ಟಿ ಹಾಲ್ ಮಾಡಿಕೊಂಡಿರುವ ಫೋಟೋಸ್ ಬಿಡುಗಡೆ ಮಾಡಿದ್ರು. ಇದುವರೆಗೂ ಸಾಕಷ್ಟು ಹಗರಣ ಬಯಲಿಗೆ ತಂದಿದ್ದೇನೆ. ಮಾಧ್ಯಮಗಳ ಸಹಕಾರದಿಂದ 12 ಸಾವಿರ ಕೋಟಿ ಸರ್ಕಾರಿ ಸ್ವತ್ತು ವಾಪಾಸ್ ಕೊಡಿಸಿದ್ದೇನೆ ಅಂತ ಮಾಹಿತಿ ನೀಡಿದ್ರು.

