ಕೆಲವು ಸಮಯದ ಹಿಂದೆ ರಾಜ್ಯ ಸರ್ಕಾರವು ಮೂವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯರನ್ನಾಗಿ ನೇಮಿಸಿತ್ತು. ಅದರಲ್ಲಿ ರಾಘವೇಂದ್ರ ಭಟ್ ಒಬ್ಬರು . ಆದರೆ ಅವರ ನೇಮಕಾತಿ ಆದೇಶವನ್ನು ತೀವ್ರ ವಿರೋಧ ಹಾಗೂ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆಹಿಡಿದಿದೆ. ಕಾರಣವೇನೆಂದರೆ ಅವರು ರಾಹುಲ್ ಗಾಂಧಿಯನ್ನು ‘ಅಂಡೆಪಿರ್ಕಿ’ ಎಂದು ಕರೆದದ್ದು.

ನೇಮಕಾತಿ ಆದೇಶದ ಬಳಿಕ ರಾಘವೇಂದ್ರ ಭಟ್ ಅವರು 2021ರಲ್ಲಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ (ʼಫಟಿಂಗʼ, ʼಅಂಡೆ ಪಿರ್ಕಿʼ, ʼಓಡುಗಳ್ಳʼ ) ಕಟುವಾಗಿ ಟೀಕಿಸಿದ್ದ ಹಳೆಯ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿದ್ದವು. ರಾಹುಲ್ ಗಾಂಧಿಯವರನ್ನು ಹೀಯಾಳಿಸಿದ ವ್ಯಕ್ತಿಗೆ ಉನ್ನತ ಹುದ್ದೆ ನೀಡಿದ್ದಕ್ಕೆ ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಎಐಸಿಸಿ (AICC) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಹುಲ್ ಗಾಂಧಿ ಅವರಿಗೆ ಅಧಿಕೃತ ದೂರು ನೀಡಿದ್ದರು.
ಕಾಂಗ್ರೆಸ್ ವಲಯದಿಂದ ವ್ಯಕ್ತವಾದ ಭಾರಿ ಒತ್ತಡ ಮತ್ತು ತೀವ್ರ ಅಸಮಾಧಾನಕ್ಕೆ ಮಣಿದ ರಾಜ್ಯ ಸರ್ಕಾರವು, ರಾಘವೇಂದ್ರ ಭಟ್ ಅವರ ನೇಮಕಾತಿಯನ್ನು ತುರ್ತಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
