ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯಿಂದ ಗ್ರಾಹಕರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ, ನಿರ್ದೇಶಕರು ಸೇರಿ ಕೆಲ ಸಿಬ್ಬಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಲ ಉಪನಿಬಂಧಕರ ನ್ಯಾಯಾಲಯ ಈ ಹಿಂದೆ ಆದೇಶವನ್ನು ನೀಡಿತ್ತು.

ಇದೀಗ ಅವ್ಯವಹಾರ ಪ್ರಕರಣದಲ್ಲಿ ದಕ್ಷಿಣ ಕನ್ನಡ ಗ್ರಾಹಕ ಬಿಕ್ಕಟ್ಟು ಪರಿಹಾರ ಆಯೋಗದಿಂದಲೂ ಮಹತ್ವದ ಆದೇಶ ಹೊರಬಿದ್ದಿದ್ದು, ಆಯೋಗದ ಮುಂದೆ ಕೇಸು ದಾಖಲಿಸಿದ ಎಲ್ಲಾ 24 ಸಂತ್ರಸ್ತ ಅರ್ಜಿದಾರರಿಗೆ 45 ದಿನದೊಳಗಾಗಿ ಅವರು ಠೇವಣಿ ಇಟ್ಟಿದ್ದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು ಎಂದು ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗೆ ಸೂಚಿಸಲಾಗಿದೆ.
ಸೊಸೈಟಿಯಲ್ಲಿ ಹಣ ಇಲ್ಲದಿದ್ದರೆ, ಆಡಳಿತ ಸಮಿತಿ ಪದಾಧಿಕಾರಿಗಳು, ನಿರ್ದೇಶಕರು ಸೇರಿ ಸಂಬಂಧಪಟ್ಟವರು ವೈಯಕ್ತಿಕ ಹಣವನ್ನು ಸೇರಿಸಿ ಸಂತ್ರಸ್ತರ ಹಣ ವಾಪಸ್ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಸೊಸೈಟಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದ್ದ ಹಣ ಮೆಚ್ಯುರಿಟಿಗೊಂಡ ದಿನಾಂಕದಿಂದ ಇಲ್ಲಿಯವರೆಗೆ ಅನ್ವಯವಾಗುವಂತೆ ಶೇ 6 ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ಅಧ್ಯಕ್ಷ ಸೋಮಶೇಖರ ಕೆ.ಹಂಡಿಗೋಳ ಮತ್ತು ಆಯೋಗದ ಸದಸ್ಯೆ ಜಿ. ಶಾರದಮ್ಮ ಅವರು ಆದೇಶ ಪ್ರಕಟಿಸಿದ್ದಾರೆ.
