ಕೃಷ್ಣ ಭಕ್ತಿಯ ಮೂಲಕ ಪರಿಚಯವಾದ ಸುಳ್ಯದ ಯುವಕ ಹಾಗೂ ಅಮೆರಿಕದ ಯುವತಿ ಈಗ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರನ್ನು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಸಾಯಿ ಸಂಕೇತ್ ಅವರು ಮಡಿಕೇರಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಚೆನ್ನೈ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಉದ್ಯೋಗ ನಿರ್ವಹಿಸಿ, ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದರು. ಅದೇ ಸಮಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಮೆರಿಕದ ಶಾನೋನ್, ಮಾಯಾಪುರದಲ್ಲಿ ನೆಲೆಸಿ ಆನ್ಲೈನ್ ವೃತ್ತಿ ನಡೆಸುತ್ತಿದ್ದರು.
ಸಂಕೇತ್ ಅವರ ಉದ್ಯಮ ಮಳಿಗೆಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದು, ಅದು ಪ್ರೀತಿಗೆ ತಿರುಗಿದೆ. ಇಬ್ಬರೂ ಇಸ್ಕಾನ್ ಪರಂಪರೆಯ ಕೃಷ್ಣ ಭಕ್ತರಾಗಿದ್ದು, ಆಧ್ಯಾತ್ಮಿಕ ಚಿಂತನೆ, ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನ ಹಾಗೂ ಒಂದೇ ರೀತಿಯ ಜೀವನ ಮೌಲ್ಯಗಳು ಇವರನ್ನು ಮತ್ತಷ್ಟು ಹತ್ತಿರ ತಂದವೆ. ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಅರ್ಥ ಮಾಡಿಕೊಂಡ ಬಳಿಕ ಇದೀಗ ಸತಿ-ಪತಿಯಾಗಿದ್ದಾರೆ.

