ವೃದ್ಧಾಶ್ರಮದಲ್ಲಿದ್ದ ತಮ್ಮ 78 ವರ್ಷದ ತಂದೆ ಸಾವನ್ನಪ್ಪಿದರೂ ಕೂಡ ಅವರ ಮೂರು ಹೆಣ್ಣು ಮಕ್ಕಳು ತಮ್ಮ ತಂದೆಯ ಅಂತಿಮ ದರ್ಶನವನ್ನು ಪಡೆಯಲು ಸ್ಥಳಕ್ಕೆ ತೆರಳದೆ, ಹಣವನ್ನು ಕಳುಹಿಸಿ, ವಿಡಿಯೋ ಕಾಲ್ ಮುಖಾಂತರವೇ ಅವರ ಅಂತ್ಯ ಸಂಸ್ಕಾರವನ್ನು ವೀಕ್ಷಿಸಿದ ಅತ್ಯಂತ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

ಮುಂಬೈನ ಮಾಜಿ ಬಟ್ಟೆ ವ್ಯಾಪಾರಿಯಾಗಿದ್ದ 78 ವರ್ಷದ ಶಿವಚರಣ್ ರಾಮ್ ರತನ್ ಗುಪ್ತಾ, ಸೋನಿಪತ್ನ ವೆಸ್ಟ್ ರಾಮ್ ನಗರದಲ್ಲಿರುವ ಸಮಾಜ ಕಲ್ಯಾಣ ಶಿಕ್ಷಣ ಸಮಿತಿಯು ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಕಳೆದ 18 ತಿಂಗಳುಗಳಿಂದ ವಾಸಿಸುತ್ತಿದ್ದರು. ಅವರು ತಮ್ಮ ಪತ್ನಿ ಮೀನಾ ಅವರೊಂದಿಗೆ ಅಲ್ಲಿಗೆ ತೆರಳಿದ್ದರು, ಆದರೆ ಪತ್ನಿ ನಿಧನರಾದ ನಂತರವೂ ಅವರು ಅಲ್ಲಿಯೇ ಏಕಾಂಗಿಯಾಗಿ ವಾಸಿಸುತ್ತಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ ನಿಧನರಾದರು.
ಅವರು ನಿಧನರಾದ ತಕ್ಷಣ ವೃದ್ಧಾಶ್ರಮದವರು ಅವರ ಪುತ್ರಿಯರಿಗೆ ವಿಷಯ ಮುಟ್ಟಿಸಿ ಅಂತಿಮ ಸಂಸ್ಕಾರಕ್ಕೆ ಬನ್ನಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಆದ್ರೆ ಅವರು ಒಲ್ಲೆ ಎಂದಿದ್ದಾರೆ.
ಕುಟುಂಬದವರು ಯಾರೂ ಜೊತೆಗಿಲ್ಲದ ಕಾರಣ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಮುಂದೆ ಬಂದು, ಅವರೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಗುಪ್ತಾ ಅವರ ಅಂತ್ಯಸಂಸ್ಕಾರವನ್ನು ಪೂರೈಸಿದರು. ದಹನಕ್ರಿಯೆಯುದುದ್ದಕ್ಕೂ ಅವರ ಹೆಣ್ಣುಮಕ್ಕಳು ನೂರಾರು ಕಿಲೋಮೀಟರ್ ದೂರದಿಂದ ವೀಡಿಯೊ ಕಲ್ ಮೂಲಕ ಸಂಪರ್ಕದಲ್ಲಿದ್ದು ತಮ್ಮ ತಂದೆಯ ಅಂತಿಮ ವಿದಾಯವನ್ನು ವೀಕ್ಷಿಸಿದ್ದಾರೆ.
ಅಲ್ಲದೆ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ಕೇವಲ ₹5,100 ಕಳುಹಿಸಿ ತಮ್ಮ ಜವಾಬ್ದಾರಿ ಮುಗೀತು ಎಂದು ಅವರು ಕೈ ತೊಳೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮಾಜಿ ಪೊಲೀಸ್ ಆಯುಕ್ತ ಸಜ್ಜನಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರೆಕ್ಕೆಗಳನ್ನೇ ಕತ್ತರಿಸಿಕೊಂಡು ಮಕ್ಕಳನ್ನು ಬೆಳೆಸಿದ ತಂದೆ-ತಾಯಿಯ ಮೇಲಿನ ಪ್ರೀತಿ, ಮಮತೆ ಮತ್ತು ಜವಾಬ್ದಾರಿ ಎಲ್ಲಿಗೆ ಹೋಯಿತು?” ಎಂದು ಪ್ರಶ್ನಿಸಿದ್ದಾರೆ.

