Home » ಅನೈತಿಕ ಸಂಬಂಧಕ್ಕೆ ಅಡ್ಡಿ: ಮನೆಯ ಮೇಲ್ಛಾವಣಿಯಿಂದ ಕೆಳಗೆ ಎಸೆದು ಪತಿಯನ್ನು ಕೊಲ್ಲಲು ವಿಫಲ ಪ್ರಯತ್ನ

ಅನೈತಿಕ ಸಂಬಂಧಕ್ಕೆ ಅಡ್ಡಿ: ಮನೆಯ ಮೇಲ್ಛಾವಣಿಯಿಂದ ಕೆಳಗೆ ಎಸೆದು ಪತಿಯನ್ನು ಕೊಲ್ಲಲು ವಿಫಲ ಪ್ರಯತ್ನ

ನಂತರ ಟಾಯ್ಲೆಟ್ ಕ್ಲೀನರ್ ಇಂಜೆಕ್ಷನ್ ಮೂಲಕ ಪತಿಯ ಕೊಲೆ ಮಾಡಿದ ನರ್ಸ್‌

0 comments

ಪ್ರಿಯಕರನ ಜೊತೆಯ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಎನ್ನುವ ಕಾರಣಕ್ಕೆ ನರ್ಸ್‌ವೋರ್ವಳು ಟಾಯ್ಲೆಟ್‌ ಕ್ಲೀನರ್‌ನ್ನು ಗಂಡನಿಗೆ ಇಂಜೆಕ್ಟ್‌ ಮಾಡಿ ಕೊಲೆ ಮಾಡಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ನಿಜಾಮಾಬಾದ್‌ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪ್ರಶಾಂತ್ (35) ಹತ್ಯೆಯಾದ ಪತಿ. ಇತ್ತೀಚೆಗಷ್ಟೇ ಪ್ರಶಾಂತ್‌ ಗಲ್ಫ್ನಿಂದ ಊರಿಗೆ ಮರಳಿದ್ದು, ಇದರಿಂದ ಪತ್ನಿ ಸಂಧ್ಯಾ ತನ್ನ ಪ್ರಿಯಕರನ ಜೊತೆ ಸೇರಿ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಮೊದಲಿಗೆ ಗಂಡನನ್ನು ಟೆರೆಸ್‌ನಿಂದ ತಳ್ಳಿದರೂ ಆತ ಅದೃಷ್ಟವಶಾತ್ ಬದುಕುಳಿದಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಹಾಗೂ ಇನ್ನಿತರ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಸಂಧ್ಯಾ ತನ್ನ ಪರಿಚಯದ ವೆಂಕಟ ಸಾಯಿ ಅಲಿಯಾಸ್ ಬಂಟಿಗೆ ಪ್ರಶಾಂತ್ ಜೊತೆ ಸ್ನೇಹ ಬೆಳೆಸಿ ಮದ್ಯಪಾನ ಮಾಡಿಸುವಂತೆ ಹೇಳಿದ್ದಳು. ಜೂನ್ 29ರಂದು ಇಬ್ಬರೂ ಮದ್ಯ ಸೇವಿಸಿದ ಬಳಿಕ ಕಟ್ಟಡದ ಟೆರೆಸ್‌ಗೆ ತೆರಳಿದ್ದರು. ಅಲ್ಲಿ ಸಂಧ್ಯಾ ಹಾಗೂ ಬಂಟಿ ಸೇರಿ ಪ್ರಶಾಂತ್‌ನನ್ನು ಟೆರೆಸ್‌ನಿಂದ ಕೆಳಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.

banner

ಗಂಭೀರ ಗಾಯಗೊಂಡಿದ್ದ ಪ್ರಶಾಂತ್‌ನನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಮೊದಲ ಸಂಚು ವಿಫಲವಾದ ಬಳಿಕ ಈ ರೀತಿಯಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರ್ಸ್ ಆಗಿರುವ ಸಂಧ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಶಾಂತ್‌ನ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಹಾಗೂ ಇನ್ನಿತರ ರಾಸಾಯನಿಕಗಳನ್ನು ಇಂಜೆಕ್ಷನ್ ಮೂಲಕ ದೇಹಕ್ಕೆ ಸೇರಿಸಿದ್ದಾಳೆ. ಇದರಿಂದ ಪ್ರಶಾಂತ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆತನ ತಾಯಿ ಜುಲೈ 1ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ.

ವಿಚಾರಣೆ ವೇಳೆ ವೆಂಕಟ ಸಾಯಿ ಅಲಿಯಾಸ್ ಬಂಟಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮಿಬ್ಬರ ನಡುವೆ ಜಗಳ ನಡೆಯಿತು. ನಂತರ ಅವನ ಪತ್ನಿ ಅಲ್ಲಿಗೆ ಬಂದಳು. ಇಬ್ಬರೂ ಸೇರಿ ಅವನನ್ನು ಟೆರೆಸ್‌ನಿಂದ ತಳ್ಳಿದ್ದೇವೆ ಎಂದು ಆತ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಸಂಧ್ಯಾಳ ಯೋಜನೆಯಾಗಿತ್ತು. ಆಕೆಯೇ ಹಣ ನೀಡಿದ್ದಳು ಎಂದು ಸಹ ಆತ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 4ರಂದು ಪೊಲೀಸರು ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಹಾಗೂ ವೆಂಕಟ ಸಾಯಿ ಅಲಿಯಾಸ್ ಬಂಟಿಯನ್ನು ಬಂಧಿಸಿದ್ದಾರೆ. ಮೂವರ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

You may also like