ಬೆಂಗಳೂರು: ವಾಜರಹಳ್ಳಿಯ ಬಿಸಿಸಿಎಚ್ಎಸ್ ಲೇಔಟ್ನ ಮನೆಯಲ್ಲಿ 4 ತಿಂಗಳ ಅವಳಿ ಹೆಣ್ಣು ಕಂದಮ್ಮಗಳನ್ನು ನೀರು ತುಂಬಿದ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿಯೊಬ್ಬಳು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಕೃತ್ಯ ಎಸಗಿದ ಮಹಿಳೆಯನ್ನು ಉಮಾದೇವಿ (44) ಎಂದು ಗುರುತಿಸಲಾಗಿದೆ. ಪತಿ ರಾಮಲಿಂಗಪ್ಪ ನೀಡಿದ ದೂರಿನ ಆಧಾರದ ಮೇಲೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ರಾಮಲಿಂಗಪ್ಪ-ಉಮಾದೇವಿ 2002 ರಲ್ಲಿ ವಿವಾಹವಾಗಿದ್ದು, ಪತಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದಾರೆ. ಬಿಸಿಸಿಎಚ್ಎಸ್ ಲೇಔಟ್ನಲ್ಲಿ ವಾಸ ಮಾಡುತ್ತಿದ್ದರು.

ಇವರಿಗೆ ಮಕ್ಕಳಾದ ಕಾರಣದ ಕೃತಕ ಗರ್ಭಧಾರಣೆಯ ಮೂಲಕ ಚಿಕಿತ್ಸೆ ಪಡೆದಿದ್ದರು. ಇದಾದ ನಂತರ ಐವಿಎಫ್ ಚಿಕಿತ್ಸೆಯಿಂದ ಉಮಾದೇವಿ ಗರ್ಭಿಣಿಯಾಗಿದ್ದರು. ಮೇ 5 ರಂದು ಉಮಾದೇವಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಈ ನಡುವೆ ಉಮಾದೇವಿಗೆ ತನ್ನ ಮಕ್ಕಳ ಪಾಲನೆಯಲ್ಲಿ ಆಸಕ್ತಿ ಹೊಂದಿರಲಿಲ್ಲ. ಆಶ್ರಮಕ್ಕೆ ಸೇರಿಸಲು ಆಗಾಗ ಹೇಳುತ್ತಿದ್ದ ಉಮಾದೇವಿ ವಿಚಿತ್ರ ವರ್ತನೆ ಶುರು ಮಾಡಿದ್ದರು. ಇದರಿಂದ ಗಾಬರಿಗೊಂಡ ಪತಿ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯರಿಗೆ ತೋರಿಸಿ ಚಿಕಿತ್ಸೆ ನೀಡಿದ್ದರು. ವೈದ್ಯರು ಹೆರಿಗೆಯ ನಂತರ ಹಾರ್ಮೋನ್ ಅಸಮತೋಲನದಿಂದ ಈ ರೀತಿಯಾಗಿ ಉಮಾದೇವಿ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇನ್ನು ಮಂಗಳವಾರ ಮಧ್ಯಾಹ್ನ ಉಮಾದೇವಿ ಕೊಠಡಿಯ ಬಾಗಿಲು ಹಾಕಿದ್ದರು. ಮನೆಯವರು ಬಾಗಿಲು ತೆರೆದು ನೋಡಿದಾಗ ನಾಲ್ಕು ತಿಂಗಳ ಅವಳಿ ಮಕ್ಕಳು ಮೃತಪಟ್ಟಿದ್ದವು. ಇನ್ನೊಂದೆಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಉಮಾದೇವಿ ಯತ್ನ ಮಾಡಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

