ಇದುವರೆಗೂ ಪ್ರೇಮಿಗಳು, ಸಂಸಾರಿಗಳು ತಮ್ಮ ತಮ್ಮ ನಡುವೆ ಉಂಟಾಗುವ ವೈಮನಸ್ಸಿನಿಂದ ಅಥವಾ ಇನ್ನಾವುದೋ ಕಾರಣಗಳಿಂದಾಗಿ ತಮ್ಮ ಸಂಗಾತಿಗಳನ್ನು ಕುಂದಾ ಕೊಲ್ಲಿಸಿದ ಘಟನೆಗಳನ್ನು ನೋಡಿದ್ದೇವೆ. ಆದರೆ ಈಗ ರಾಜಸ್ಥಾನದಲ್ಲಿ ಮಗಳು ಒಬ್ಬಳು ಸರ್ಕಾರಿ ಕೆಲಸಕ್ಕಾಗಿ ತನ್ನ ಅಮ್ಮನಿಗೆ ಚಟ್ಟ ಕಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಈ ಕೊಲೆ ಪ್ರಕರಣವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಇದನ್ನು ಮೊದಲಿಗೆ ಅಪಘಾತ ಎನ್ನಲಾಗಿತ್ತು, ಆದರೆ ನಂತರ ಅದರ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ. ಅದರಲ್ಲೂ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವ ಸಲುವಾಗಿ ತಾಯಿಯನ್ನು ಮಗಳೇ ಕೊಲ್ಲಿಸಿದ್ದಾಳೆ ಎಂದು ತಿಳಿದುಬಂದಿದ್ದು, ಈ ಪ್ರಕರಣದಲ್ಲಿ ಮೃತರ ಮಗಳು ಆಯುಷಿ (23) ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 4 ರಂದು ಪ್ರತಾಪ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 45 ವರ್ಷದ ನೀರಜಾ ಶರ್ಮಾ ಎಂಬ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ವೇಗವಾಗಿ ಬಂದ ವಾಹನವೊಂದು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಇದು ಅಪಘಾತವಲ್ಲ ಎಂದು ಬೆಳಕಿಗೆ ಬಂದಿದೆ. ಇದು ಯೋಜಿತ ಕೊಲೆ ಎಂದು ಜೈಪುರ ಡಿಸಿಪಿ (ಪೂರ್ವ) ರಂಜಿತಾ ಶರ್ಮಾ ಹೇಳಿದ್ದಾರೆ.
ನೀರಜ್ ಶರ್ಮಾ ಸರ್ಕಾರಿ ಉದ್ಯೋಗಿಯಾಗಿದ್ದರು. ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅದಾದ ನಂತರ ಅನುಕಂಪದ ಆಧಾರದ ಮೇಲೆ ನೀರಜಾ ಗಂಡನ ಬದಲಿಗೆ ಕೆಲಸ ಪಡೆದಿದ್ದರು. ಆದರೆ ಅವರ ಮಗಳು ಆಯುಷಿ ತಂದೆಯ ಉದ್ಯೋಗವನ್ನು ತಾನು ಪಡೆಯಬೇಕು ಎಂದು ಬಯಸಿದ್ದಳು. ಇದಕ್ಕಾಗಿ ತಾಯಿಯನ್ನು ಕೊಲ್ಲುವ ಯೋಜನೆ ರೂಪಿಸಿದ್ದಾಳೆ. ಆಯುಷಿ ಜೊತೆಗೆ ಅವಳ ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಕೊಲೆಗೆ ಐದು ಅಪರಾಧಿಗಳನ್ನು ನೇಮಿಸಿಕೊಂಡಿದ್ದು, ಅವರಿಗೆ 7 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು.
ಕೊಲೆಗೂ ಮುನ್ನ ಈಗಾಗಲೇ ಒಂದು ಬಾರಿ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಲಾಗಿತ್ತು. ಆದರೆ ಅದು ವಿಫಲವಾಗಿತ್ತು ಎಂದು ತಿಳಿದುಬಂದಿದೆ. ಜುಲೈ 4 ರಂದು ಪ್ಲಾನ್ ಮಾಡಿದಂತೆ ಮಹಿಳೆಯನ್ನು ವೇಗವಾಗಿ ಬಂದು ವಾಹನದಿಂದ ಢಿಕ್ಕಿ ಹೊಡೆದು ಕೊಂದಿದ್ದಾರೆ. ಆಸ್ತಿ ವಿವಾದವೂ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಈ ಪ್ರಕರಣವು ಕುಟುಂಬದಲ್ಲಿ ಆಸ್ತಿ ಮತ್ತು ಉದ್ಯೋಗದ ಲೋಭಕ್ಕಾಗಿ ನಡೆಯುವ ಕೊಲೆಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿದೆ. ಈ ಘಟನೆ ಸಮಾಜಕ್ಕೆ ಒಂದು ದೊಡ್ಡ ಎಚ್ಚರಿಕೆಯಾಗಿದೆ.

