ವಿದ್ಯುತ್ ಲೈನ್ ಸರಿಪಡಿಸಲು ಕಂಬ ಏರಿದ್ದ ದಿನಗೂಲಿ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲೆಯೇ ಪ್ರಾಣಬಿಟ್ಟ ಘಟನೆ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹುಲಗಪ್ಪ ಎಂದು ಗುರುತಿಸಲಾಗಿದೆ. ಹುಲಗಪ್ಪ ಅವರನ್ನು ಯಾವುದೇ ಸೂಕ್ತ ಸುರಕ್ಷತಾ ಪರಿಕರಗಳಿಲ್ಲದೆ ಕಂಬ ಹತ್ತಿಸಲಾಗಿತ್ತು ಎನ್ನಲಾಗಿದೆ. ದುರಸ್ತಿ ಕಾರ್ಯದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿದ್ದರಿಂದ ಅವರು ಕಂಬಕ್ಕೆ ಸಿಲುಕಿಕೊಂಡಿದ್ದಾರೆ. ಕಂಬದ ಮೇಲೆಯೇ ಸಿಲುಕಿ ‘ಕಾಪಾಡಿ, ಕಾಪಾಡಿ’ ಎಂದು ಜೋರಾಗಿ ಕಿರುಚುತ್ತಾ, ಜೀವ ಉಳಿಸಿಕೊಳ್ಳಲು ಅವರು ನಡೆಸಿದ ಕೊನೆಯ ಹೋರಾಟದ ದೃಶ್ಯ ನೆರೆದವರನ್ನೇ ಭಯ ಬೀಳಿಸುವಂತಿತ್ತು.
ಈ ಭೀಕರ ದುರಂತಕ್ಕೆ ಜೆಸ್ಕಾಂ (GESCOM) ಅಧಿಕಾರಿಗಳು ಹಾಗೂ ಸ್ಥಳೀಯ ಲೈನ್ಮ್ಯಾನ್ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
