ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದಾಗಿ ತನ್ನ ಬಿಸಿನೆಸ್ ಲಾಸ್ ಆಗಿದೆ ಎಂದು ಬಟ್ಟೆ ವ್ಯಾಪಾರಿ ಒಬ್ಬ ತನ್ನ ಹೆಂಡತಿ ಹಾಗೂ ಮಗನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.


ಮಂಡ್ಯದ ನೆಹರು ನಗರದಲ್ಲಿ ಈ ದುರಂತ ಸಂಭವಿಸಿದ್ದು, ಪ್ರಭಾಕರ್ (65), ಅವರ ಪತ್ನಿ ಜ್ಯೋತಿ (55) ಹಾಗೂ ಮಗ ಸಂತೋಷ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ನಿನ್ನೆ ಮಧ್ಯರಾತ್ರಿ ಸುಮಾರು 3:30ರ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಭಾಕರ್, ಮೊದಲು ಪತ್ನಿ ಜ್ಯೋತಿಯನ್ನು ಪಂಚೆ ಅಥವಾ ವೇಲ್ನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ. ಈ ವೇಳೆ ತಾಯಿಯ ರಕ್ಷಣೆಗೆ ಬಂದ ಅಥವಾ ತಡೆಯಲು ಯತ್ನಿಸಿದ ಮಗ ಸಂತೋಷ್ನನ್ನೂ ಸಹ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಪತ್ನಿ ಮತ್ತು ಮಗ ಇಬ್ಬರೂ ಪ್ರಾಣಬಿಟ್ಟ ಬಳಿಕ, ಪ್ರಭಾಕರ್ ಅವರು ನೆಹರು ನಗರದಲ್ಲಿದ್ದ ತಮ್ಮ ಸ್ವಂತ ಬಟ್ಟೆ ಅಂಗಡಿಗೆ ತೆರಳಿ ಅಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಡೆತ್ ನೋಟ್ ಪತ್ತೆ :
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಡೆತ್ ನೋಟ್ ಒಂದು ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಆಶ್ಚರ್ಯಕರವಾದ ಮಾಹಿತಿ ಪತ್ತೆಯಾಗಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಜನರು ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದಾರೆ. ಇದರಿಂದ ಬಟ್ಟೆ ವ್ಯಾಪಾರ ಕಡಿಮೆಯಾಗಿದೆ. ಈ ಕಾರಣದಿಂದ ನನಗೆ ಸಾಲ ಜಾಸ್ತಿಯಾಗಿದೆ. ಸಾಲದ ಹೊರೆಯಿಂದಾಗಿ ಜೀವನ ನಡೆಸಲು ಆಗುತ್ತಿಲ್ಲ ಈ ಕಾರಣದಿಂದ ನಾನು ಹೆಂಡತಿಯನ್ನು ಕೊಲೆ ಮಾಡಿ ನೇಣಿಗೆ ಶರಣಾಗಿದ್ದೇನೆ ಎಂದು ಪ್ರಭಾಕರ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಆದರೆ ಮಗನ ಸಾವಿನ ಬಗ್ಗೆ ಡೆತ್ ನೋಟ್ ಅಲ್ಲಿ ಪ್ರಸ್ತಾಪ ಮಾಡಿಲ್ಲ. ಮಗ ಮತ್ತು ಹೆಂಡತಿಯನ್ನು ಕೊಲೆ ಮಾಡಿ ನಂತರ ಪ್ರಭಾಕರ್ ನೇಣಿಗೆ ಶರಣಾಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ
ದುಃಖದ ಸಂಗತಿಯೆಂದರೆ, ಮಗ ಸಂತೋಷ್ಗೆ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಘಟನೆ ನಡೆದಾಗ ಬೆಳಗಿನ ಜಾವ 3:30 ಆಗಿದ್ದರಿಂದ ನವವಿವಾಹಿತ ಸೊಸೆ ಗಾಢ ನಿದ್ರೆಯಲ್ಲಿದ್ದರು. ಮನೆಯ ಮತ್ತೊಂದು ಕೋಣೆಯಲ್ಲಿ ಮಾವನೇ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡುತ್ತಿದ್ದರೂ ಆಕೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮುಂಜಾನೆ ಎದ್ದು ತಿಂಡಿ ಸಿದ್ಧಪಡಿಸಿ, ಅತ್ತೆಯನ್ನು ಎಬ್ಬಿಸಲು ಕೋಣೆಗೆ ಹೋದಾಗ ಜ್ಯೋತಿ ಮತ್ತು ಸಂತೋಷ್ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಈ ವಿಷಯ ಹೊರಬಿದ್ದಿದ್ದು, ಯುವತಿಯ ಆಕ್ರಂದನ ಮುಗಿಲು ಮುಟ್ಟಿದೆ.

