ಮಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, ಡಿಸ್ಚಾರ್ಜ್ ವೇಳೆ ಬಿಲ್ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಅವುಗಳಿಗೆ ತಗಲುವ ಖರ್ಚು ಎಷ್ಟು ಎನ್ನುವುದು ರೋಗಿಗಳಿಗೂ ತಿಳಿದಿರಬೇಕು. ಇದಕ್ಕೆ ಸರಕಾರ ಎಷ್ಟು ಶ್ರಮವಹಿಸಿದೆ? ಒಬ್ಬ ರೋಗಿಗೆ ಸರಕಾರ ಎಷ್ಟು ಮೊತ್ತವನ್ನು ಖರ್ಚು ಮಾಡುತ್ತದೆ? ಎಂದು ತಿಳಿದಿರಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೋಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹೊರಗೆ ಹೋಗುವಾಗ ವೆಚ್ಚದ ಕುರಿತು ಬಿಲ್ ನೀಡಲಾಗುವುದು. ಆದರೆ ಬಿಲ್ ಮೊತ್ತದ ಹಣವನ್ನು ಅವರಿಂದ ಪಡೆಯುವುದಿಲ್ಲ. ಅದು ಮೊತ್ತ ಪಾವತಿ ರಹಿತ ಬಿಲ್ ಆಗಿರುತ್ತದೆ.
ಈ ಮಾದರಿಯನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದಲೇ ಪ್ರಾರಂಭ ಮಾಡಲಾಗುವುದು ನಂತರ ರಾಜ್ಯದ ಎಲ್ಲಾ ಕಡೆಗೂ ಈ ವ್ಯವಸ್ಥೆ ವಿಸ್ತರಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಕೌನ್ಸಲಿಂಗ್ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಈ ಕುರಿತು ಪರಮಾರ್ಶೆ ನಡೆಸಲು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದ್ದು, ಮುಂದಿನ ವರ್ಗಾವಣೆ ಸಮಯದಲ್ಲಿ ಜಾರಿಗೆ ಬರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

