ಕಲಿಯುವ ವಿದ್ಯಾರ್ಥಿಗಳು ಇರುವ ಕಡೆ ಗ್ರಂಥಾಲಯ, ಓದುವ ಕೊಠಡಿ, ಧ್ಯಾನ ಮಂದಿರ, ಕಂಪ್ಯೂಟರ್ ಕೊಠಡಿಗಳು, ಅಭ್ಯಾಸ ನಡೆಸುವಂತಹ ಪ್ರಯೋಗಾಲಯಗಳು ಸೇರಿದಂತೆ ಓದಲು ಬೇಕಾಗುವಂತಹ ಅಚ್ಚುಕಟ್ಟಾದ ವಾತಾವರಣ ಇರಬೇಕು. ಇದು ವಿದ್ಯಾರ್ಥಿಗಳು ನೆಮ್ಮದಿಯಿಂದ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇದು ಸಹಕರಿಯಾಗುತ್ತದೆ. ಆದರೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ನ ಕೆಳ ಮಹಡಿಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂ ನಲ್ಲಿ ಬೆಳಕಿಗೆ ಬಂದಿದೆ.

ಕೆ.ಆರ್ ಪುರಂನ ಅವಲಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಖಾಸಗಿ ಕಟ್ಟಡದಲ್ಲಿ ಬಾಡಿಗೆಗೆ ಇದೆ. ಇಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಇದೇ ಕಟ್ಟಡದ ನೆಲ ಮಹಡಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇರುವುದು ಎಲ್ಲರನ್ನೂ ಅಚ್ಚರಿಗೋಳಿಸಿದೆ.
ಹಾಸ್ಟೆಲ್ ಕಳೆದ ಎರಡು ವರ್ಷಗಳಿಂದ ಇದೇ ಕಟ್ಟಡದಲ್ಲಿದೆ. ಆದರೆ ಮೂರು ತಿಂಗಳ ಹಿಂದೆ ನೆಲ ಮಹಡಿಯಲ್ಲಿ ಬಾರ್ ಆರಂಭವಾಗಿದೆ. ಅಂದಿನಿಂದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಗಲು-ರಾತ್ರಿ ಬಾರ್ಗೆ ಬರುವ ಜನರ ಗದ್ದಲ, ಗಲಾಟೆಯಿಂದ ವಿದ್ಯಾರ್ಥಿಗಳ ಓದು ಮತ್ತು ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

