Home » ನಾವೂರು: ವರಮಹಾಲಕ್ಷ್ಮೀ ಪೂಜೆಗೆ ಅಡಚಣೆ, ಮನೆಗೆ ಅಕ್ರಮ ಪ್ರವೇಶ, ಜೀವ ಬೆದರಿಕೆ ಆರೋಪ-ದೂರು, ಪ್ರತಿದೂರು ದಾಖಲು

ನಾವೂರು: ವರಮಹಾಲಕ್ಷ್ಮೀ ಪೂಜೆಗೆ ಅಡಚಣೆ, ಮನೆಗೆ ಅಕ್ರಮ ಪ್ರವೇಶ, ಜೀವ ಬೆದರಿಕೆ ಆರೋಪ-ದೂರು, ಪ್ರತಿದೂರು ದಾಖಲು

0 comments
Bengaluru

ಬೆಳ್ತಂಗಡಿ: ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಕ್ಕೆ ಅಡಚಣೆ, ಮನೆಗೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಕುರಿತಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಘಟನೆ ವಿವರ: ಆ.28 ರಂದು ಮಧ್ಯಾಹ್ನ 1.30 ರ ವೇಳಗೆ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಿವೇದಿತಾ ಮಾತೃಮಂಡಳಿ ಇವರ ವತಿಯಿಂದ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಿತ್‌ ಜೈನ್‌, ಸುರೇಶ್‌ ಇಂಚರ, ದಿನೇಶ್‌ ಪ್ರಭು ಹಡಿಲು, ವಾಸು ಶೆಟ್ಟಿಗಾರ ಅಲ್ಲಾಜೆ ಹಾಗೂ ಅರುಣೋದಯ ಗೌಡ ಎನ್ನುವವರು ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಪೂಜಾ ಕಾರ್ಯಕ್ರಮಕ್ಕೆ ಅಡಚಣೆ ಉಂಟು ಮಾಡಿ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಈ ಕುರಿತು ನಿವೇದಿತಾ ಮಾತೃಮಂಡಳಿಯ ಅಧ್ಯಕ್ಷೆ ಜಯಂತಿ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಎನ್‌ಆರ್‌ಸಿ ದಾಖಲಾಗಿದೆ.

ಆ.29 ರಂದು ಪ್ರಿಯಾ ಲಕ್ಷ್ಮಣ್‌ ಅವರ ಮನೆಗೆ ಸುರೇಶ್‌ ಪಿ ಎನ್‌ ಎನ್ನುವವರು ಅಕ್ರಮ ಪ್ರವೇಶ ಮಾಡಿ ಅಸಭ್ಯ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾರೆ. ಅದೇ ದಿನ ಮಧ್ಯಾಹ್ನ ದೂರುದಾರರು ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಕಾರಿಗೆ ಅಡ್ಡಗಟ್ಟಿದ ಆರೋಪಿಯು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಜಾಗದ ತರಕಾರರಿಗೆ ಸಂಬಂಧಪಟ್ಟಂತೆ ಈ ಹಿಂದೆ ದೂರು ನೀಡಿರುವುದೇ ಈ ಘಟನೆಗೆ ಕಾರಣ ಎಂದು ಪ್ರಿಯಾ ಲಕ್ಷ್ಮಣ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ 28 ರಂದು ರಾತ್ರಿ ಸುಮಾರು 11 ಗಂಟೆಗೆ ನಾವೂರು ಗ್ರಾಮದ ಲಕ್ಷ್ಮಿ ಕೃಪಾ ನಿವಾಸಿ ತುಳಸಿ ಅವರ ಮನೆ ಬಳಿ ರವಿ ಪೂಜಾರಿ ಬಂದಿದ್ದು, ದೂರುದಾರರ ಪತಿಯನ್ನು ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಆ.29 ರಂದು ಬೆಳಗ್ಗೆ ಗ್ರಾಮ ಪಂಚಾಯತ್‌ ಬಳಿ ಸುರೇಶ್‌ ಹಾಗೂ ರವಿ ಪೂಜಾರಿ ಸೇರಿ ದೂರುದಾರರ ಪತಿಯನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕುರಿತು ತುಳಸಿ ಅವರು ನೀಡಿದ ದೂರಿನನ್ವಯ ರವಿ ಪೂಜಾರಿ ಎ1, ಸುರೇಶ್‌ ಅವರನ್ನು ಎ2 ಎಂದು ಹೆಸರಿಸಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪ್ರತಿದೂರು ದಾಖಲು
ತನ್ನ ಪತಿ ಸುರೇಶ್‌ ಅವರು ಆ.28 ರಂದು ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಹೋಗಿದ್ದು, ಆರೊಪಿತೆ ಪ್ರಿಯಾ ಲಕ್ಷ್ಮಣ ಅವರಿಗೂ ತನ್ನ ಪತಿಗೂ ಮಾತಿಗೆ ಮಾತು ಆಗಿದ್ದು, ಆ.29 ರಂದು ಮಧ್ಯಾಹ್ನ 3.15 ಕ್ಕೆ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿದ ಪ್ರಿಯಾ ಲಕ್ಷ್ಮಣ ಅವರು ತನ್ನನ್ನು ಮತ್ತು ತನ್ನ ಪತಿಗೆ ಅವಾಚ್ಯವಾಗಿ ನಿಂದನೆ ಮಾಡಿ ಇಬ್ಬರನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಜಾಗದ ವಿಷಯದಲ್ಲಿ ತಕರಾರು ಇರುವುದೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಸುರೇಶ್‌ ಅವರ ಪತ್ನಿ ಸುಮಾ ದೂರು ನೀಡಿದ್ದು, ಅದರಂತೆ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like