ಮೈಮೇಲೆ ಮರ ಬಿದ್ದು ಯುವಕ ಮೃತ್ಯು

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಸ್ರಿಕಲ್ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಮರಗಸಿ ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಮರ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಕಳಸ ಹೋಬಳಿ ವ್ಯಾಪ್ತಿಯ ಸಂಸೆ ಗ್ರಾಮ ಪಂಚಾಯತ್‍ನ ಬಸ್ರಿಕಲ್ ಗ್ರಾಮದ ನಿವಾಸಿ ಅಮಿತ್ ಶಾಲ್ಡಾನ (25) ಮೃತ ಯುವಕ. ಬುಧವಾರ ತನ್ನ ಮನೆಯ ಸಮೀಪದ ಕಾಫಿ ತೋಟವೊಂದಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಬೈನೆ ಮರವೊಂದನ್ನು ಕಾರ್ಮಿಕರು ಕಡಿದಿದ್ದಾರೆ. ಈ ವೇಳೆ ಮರಕ್ಕೆ ಹಗ್ಗ ಕಟ್ಟಿ ಎಳೆದು ಹಿಡಿದುಕೊಂಡಿದ್ದ ಅಮಿತ್ ಶಾಲ್ಡಾನ ಮೇಲೆಯೇ ಮರ ಬಿದ್ದಿದೆ ಎಂದು ತಿಳಿದು ಬಂದಿದೆ.

ಮರ ಮೈಮೇಲೆ ಬಿದ್ದ ಪರಿಣಾಮ ಅಮಿತ್‍ನ ಬೆನ್ನು ಮೂಳೆ ಮುರಿದಿದ್ದು, ತೀವ್ರ ರಸ್ತಸ್ರಾವವಾಗಿದೆ. ಕೂಡಲೇ ಆತನನ್ನು ಕಳಸದ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವಕ ದಾರಿ ಮಧ್ಯೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆ ಕುರಿತು ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.