Parliament : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಮಸೂದೆಯಾಗಿರುವ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಮರವಿಂಗಡಣೆ ಮಸೂದೆ ಲೋಕಸಭೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿದೆ. ಆದರೆ ಈ ಮಸೂದೆಗಳ ಸೋಲು ಬಿಜೆಪಿಗೆ ಅನಿರೀಕ್ಷಿತವಾಗಿರಲಿಲ್ಲ. ನಿರೀಕ್ಷಿತವೇ ಆಗಿತ್ತು. ಯಾಕೆಂದರೆ ಬಿಜೆಪಿಯ ವರಿಷ್ಠರಿಗೆ ಈ ಎರಡು ಮಸೂದೆಗಳು ಲೋಕಸಭೆಯಲ್ಲಿ ಪಾಸ್ ಆಗಲಾರವು ಎಂಬ ವಿಚಾರ ಮೊದಲೆ ತಿಳಿದಿತ್ತು. ಹೀಗಿದ್ದರೂ ಕೂಡ ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿ ಬಿಲ್ ಅನ್ನು ಮಂಡಿಸಲು ಆತುರ ಮಾಡಿದ್ದೇಕೆ? ಮೋದಿ ಮತ್ತು ಅಮಿತ್ ಶಾ ಲೆಕ್ಕಾಚಾರ ಮಿಸ್ ಹೊಡೆದದ್ದು ಎಲ್ಲಿ? ಇಲ್ಲಿದೆ ನೋಡಿ ಡೀಟೇಲ್ಸ್.


ಬಿಲ್ ತರಲು ಆತುರವೇಕೆ?
ಕೊಲ್ಲಿ ಯುದ್ಧದ ಕಾರಣದಿಂದ ಸಿಲಿಂಡರ್ ಸಮಸ್ಯೆಯಿಂದ ಮುನಿಸಿಕೊಂಡಿರುವ ಮಹಿಳೆಯರ ಮನ ಒಲಿಸಬಹುದು, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವೋಟುಗಳು ಹರಿದು ಬರಬಹುದು ಎಂಬೆಲ್ಲ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಆದರೂ ಒಂದು ಜನಪ್ರಿಯ ಚುನಾಯಿತ ಸರ್ಕಾರ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸಂಸದರ ಬೆಂಬಲ ತನಗೆ ಇಲ್ಲ ಎಂದು ಗೊತ್ತಿದ್ದರೂ ತರಾತುರಿಯಲ್ಲಿ ವಿಶೇಷ ಅಧಿವೇಶನ ಕರೆದು ಮಸೂದೆಯನ್ನು ಮತಕ್ಕೆ ಹಾಕಿ ಸೋಲು ಕಂಡಿರುವುದು ಕೇವಲ ಮಹಿಳಾ ಮತದಾರರ ಅನುಕಂಪಕ್ಕೆ ಅನ್ನೋದು ಪಥ್ಯ ಆಗುತ್ತಿಲ್ಲ ಬಿಡಿ. ಮೇಲುನೋಟಕ್ಕೆ ಅರ್ಥ ಆಗುವುದು ಏನೆಂದರೆ, ಮೋದಿ ಸರ್ಕಾರಕ್ಕೆ 2029ರ ಚುನಾವಣೆಯಲ್ಲಿಯೇ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಿತ್ತು. ಹೀಗಾಗಿ ಮಹಿಳಾ ವಿಧೇಯಕವನ್ನು ಗಂಟು ಹಾಕಿಸಿ ತರಲಾಯಿತು ಎನ್ನುವುದು ಅಷ್ಟೇ. ಗೆದ್ದರೆ 2029ರ ಕ್ಷೇತ್ರ ವಿಂಗಡಣೆ, ಸೋತರೆ ಮಹಿಳಾ ವಿಧೇಯಕದ ಸೋಲು, ಜತೆಗೆ ಪ್ರತಿಪಕ್ಷಗಳಿಗೆ ಸೋಲಿನ ಕಳಂಕ ಕಟ್ಟುವುದು!
ಮಸೂದೆ ಸೋಲು ಕಂಡಿದ್ದು ಏಕೆ?
ಮೊದಲ ಬಾರಿ ಮೋದಿ ಮತ್ತು ಅಮಿತ್ ಶಾ ಸದನದಲ್ಲಿ ಬಹುಮತ ಇಲ್ಲ, ನಾವು ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲು ವಿಧೇಯಕ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಒಟ್ಟೊಟ್ಟಿಗೆ ತಂದು ಸದನದಲ್ಲಿ ಪಾಸು ಮಾಡಿಸಿಕೊಳ್ಳುತ್ತೇವೆ ಎಂದು ಉತ್ಸಾಹದಲ್ಲೇ ಇದ್ದರೂ ಮಸೂದೆ ಪಾಸು ಆಗಿಲ್ಲ.
ಉಲ್ಟಾ ಹೊಡೆದ ಲೆಕ್ಕಾಚಾರ:
ಪಶ್ಚಿಮ ಬಂಗಾಳ ಚುನಾವಣೆ ಕಾರಣ ತೃಣಮೂಲ ಕಾಂಗ್ರೆಸ್ನ 29 ಸಂಸದರು ಸದನಕ್ಕೆ ಬರಲಿಕ್ಕಿಲ್ಲ ಎಂಬ ನಿರೀಕ್ಷೆಯಲ್ಲಿ ಆಡಳಿತ ಪಕ್ಷ ಇತ್ತು. ಮೂಲಗಳು ಹೇಳುವ ಪ್ರಕಾರ, ತೆರೆಯ ಹಿಂದೆ ಮಾತುಕತೆ ಕೂಡ ನಡೆದಿತ್ತು. ಆದರೆ ಅಧಿವೇಶನದ ಹಿಂದಿನ ದಿನ ಪ್ರಿಯಾಂಕಾ ಗಾಂಧಿ ಮತ್ತು ಮಮತಾ ಅಳಿಯ ಅಭಿಷೇಕ ಬ್ಯಾನರ್ಜಿ ನಡುವೆ ಮಾತುಕತೆ ನಡೆದಿದ್ದರಿಂದ ಅಷ್ಟೂ ಸಂಸದರು ಸದನಕ್ಕೆ ಬಂದುಬಿಟ್ಟರು. ಇನ್ನೊಂದು ಕಡೆ, ಸಮಾಜವಾದಿ ಪಕ್ಷದ 37 ಸಂಸದರು ಮತದಾನದ ಶುರು ಆದಾಗ ಸದನದಿಂದ ಹೊರ ನಡೆಯುತ್ತಾರೆ, ಆಗ 540 ಸದಸ್ಯ ಬಲದ ಸಂಖ್ಯೆ 474ಕ್ಕೆ ಕುಸಿಯುತ್ತದೆ ಎಂಬ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ ಯಾವಾಗ ಲೆಕ್ಕಾಚಾರ ಉಲ್ಟಾ ಆಯಿತೋ ಮಸೂದೆಗೆ ಅಂಗೀಕಾರ ಸಿಗುವುದಿಲ್ಲ ಎಂದು ಅಮಿತ್ ಶಾ ಅವರಿಗೆ ಮಧ್ಯಾಹ್ನವೇ ಅರ್ಥವಾಗಿತ್ತು.
ಸ್ಪಷ್ಟತೆಯ ಕೊರತೆ ಕೊರತೆ:
ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ದಕ್ಷಿಣದ ರಾಜ್ಯಗಳಿಗೆ ಮೋಸ ಆಗುತ್ತದೆ ಎಂಬ ಕೂಗು ಕೇಳಿ ಬರುತ್ತಲೇ ಇತ್ತು. ಆದರೆ ಮೋದಿ ಸರ್ಕಾರ ಬಾಯಿ ಮಾತಿನಲ್ಲಿ ಮಾತ್ರ ಯಾವುದೇ ರಾಜ್ಯಗಳಿರಲಿ ಸಾರ್ವತ್ರಿಕವಾಗಿ ಶೇಕಡಾ 50ರಷ್ಟು ಸೀಟುಗಳು ಹೆಚ್ಚಳ ಆಗುತ್ತವೆ ಎಂದು ಹೇಳಿತು. ಆದರೆ ಮಸೂದೆಯಲ್ಲಿ ಮಾತ್ರ ಸ್ಪಷ್ಟ ಉಲ್ಲೇಖ ಇರಲಿಲ್ಲ. ಅಲ್ಲದೆ ಸರ್ವಪಕ್ಷ ಸಭೆ ಕರೆದು ಈ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಕೂಡ ಮೋದಿ ಸರ್ಕಾರ ಮಾಡಲಿಲ್ಲ.
ಅಲ್ಪಸಂಖ್ಯಾತ ಮತದಾರರು ಹಂಚಿಹೋಗುವ ಆತಂಕ ಪ್ರತಿಪಕ್ಷಗಳಿಗಿತ್ತು :
ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಪ್ರತಿಪಕ್ಷದ ನಾಯಕರು ಏಕೆ ಈ ಮಸೂದೆಯನ್ನು ವಿರೋಧಿಸಿದರು ಎಂದರೆ ಪ್ರಮುಖ ಕಾರಣ ತಮ್ಮ ಗೆಲುವಿಗೆ ಸಹಕಾರಿಯಾಗುವ ಅಲ್ಪಸಂಖ್ಯಾತ ಮತದಾರರು ಚದುರಿ ಹೋಗುವ ಆತಂಕ ತುಂಬಾನೇ ಇತ್ತು. ಏಕೆಂದರೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಬಳಿ ಈಗ 20 ರಾಜ್ಯ ಸರ್ಕಾರಗಳಿವೆ. ಒಂದು ವೇಳೆ ಬಿಜೆಪಿಯನ್ನು ಶತಾಯ ಗತಾಯ ವಿರೋಧಿಸುವ ಮುಸ್ಲಿಂ ಮತದಾರರನ್ನು ಹೊಸ ಕ್ಷೇತ್ರಗಳಲ್ಲಿ ಛಿದ್ರ ಛಿದ್ರ ಮಾಡಿ ಹಾಕಿದರೆ ಮುಂದಿನ 20 ವರ್ಷ ಅಧಿಕಾರವನ್ನು ಬಿಜೆಪಿಗೆ ತಟ್ಟೆಯಲ್ಲಿ ಇಟ್ಟು ಕೊಟ್ಟಂತೆ ಎಂಬುದು ವಿಪಕ್ಷಗಳಿಗೆ ಗೊತ್ತಿದೆ. ಜೊತೆಗೆ ಕ್ಷೇತ್ರ ಮರು ವಿಂಗಡಣೆಗೆ ಈಗ ಒಪ್ಪಿಗೆ ಕೊಟ್ಟರೆ ಅಸ್ಸಾಂ ಮತ್ತು ಜಮ್ಮು- ಕಾಶ್ಮೀರದಲ್ಲಿ ಮಾಡಿದಂತೆ, ಮೋದಿ ಮತ್ತು ಅಮಿತ್ ಶಾ ಸ್ವಪಕ್ಷಕ್ಕೆ ಮುಂದಿನ 20 ವರ್ಷ ಕಾಲ ಅನುಕೂಲ ಆಗುವ ರೀತಿಯಲ್ಲಿ ಕ್ಷೇತ್ರಗಳನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾಡಿಕೊಂಡರೆ ಕತೆ ಏನು ಎನ್ನುವ ಆತಂಕ ವಿರೋಧ ಪಕ್ಷಗಳಿಗಿತ್ತು.

