Home » ಕಾಂಗ್ರೆಸ್ ಜೊತೆ TMC ವಿಲೀನ? ಮಮತಾ ಬ್ಯಾನರ್ಜಿಗೆ ಉಪಾಧ್ಯಕ್ಷೆ ಪಟ್ಟ?

ಕಾಂಗ್ರೆಸ್ ಜೊತೆ TMC ವಿಲೀನ? ಮಮತಾ ಬ್ಯಾನರ್ಜಿಗೆ ಉಪಾಧ್ಯಕ್ಷೆ ಪಟ್ಟ?

0 comments

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಮಮತಾ ಬ್ಯಾನರ್ಜಿಗೆ ಎಲ್ಲಿಲ್ಲದ ಮುಖಭಂಗವಾಗುತ್ತಿದೆ. ತಮ್ಮ ಪಕ್ಷದ ಶಾಸಕರು ಸಂಸದರು ರಾಜೀನಾಮೆ ನೀಡಿ ಎನ್‌ಡಿಎ ಮೈತ್ರಿಕೂಟವನ್ನು ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ದೀದಿ ನೇತೃತ್ವದ ಋಣಮೂಲ ಕಾಂಗ್ರೆಸ್ ಛಿದ್ರ ಛಿದ್ರವಾಗುತ್ತಿದೆ. ಇದು ತನ್ನ ಭದ್ರಕೋಟೆಯಲ್ಲಿ ದೀದಿಗೆ ಅಸ್ತಿತ್ವದ ಪ್ರಶ್ನೆ ಕಾಡುವಂತೆ ಮಾಡಿದೆ. ಇದರ ನಡುವೆಯೇ ಇಂಡಿಯಾ ಮಹಾಮೈತ್ರಿಕೂಟದ ಸಭೆ ನಡೆದಿದ್ದು,  ಸಭೆಯ ನಂತರ, ಸುದ್ದಿಗೆ ರೆಕ್ಕೆಪುಕ್ಕದೊಂದಿಗೆ ಭಾರತದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.

ಕಳೆದ ಸೋಮವಾರ (ಜೂನ್ 9) ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆದಿತ್ತು. ಡಿಎಂಕೆ, ಆಮ್ ಆದ್ಮಿ ಪಾರ್ಟಿಯ ಬಹಿಷ್ಕಾರದ ಮಧ್ಯೆಯೂ ನಡೆದ ಸಭೆಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ವೇಳೆ ಮಮತಾ ಅವರನ್ನು ಅತ್ಯಂತ ಆತ್ಮೀಯವಾಗಿ ಕಂಡ ಸೋನಿಯಾ ಗಾಂಧಿಯವರು ಅವರಿಗೆ ಸೋಲಿನ ಸಾಂತ್ವಾನ ಮಾಡಿದ್ದಾರೆ ಎನ್ನಲಾಗಿದೆ. 

ಇನ್ನೂ ಬಂಗಾಳದಲ್ಲಿ ಕಾಂಗ್ರೆಸ್ ಪಾರ್ಟಿಗೆ ಅಸ್ತಿತ್ವವೇ ಇಲ್ಲ, ಅವರ ಜೊತೆ ಸೀಟು ಹೊಂದಾಣಿಕೆ ಮಾಡಿಕೊಂಡರೆ ಪಾರ್ಟಿಗೆ ನಷ್ಟ ಎಂದು ಕಡ್ಡಿಮುರಿದ ಹಾಗೆ ಮಾತನಾಡಿದ್ದ ಮಮತಾ ಈಗ, ಕಾಂಗ್ರೆಸ್ ಕದ ತಟ್ಟುತ್ತಿದ್ದಾರಾ? ಮಮತಾ ಮತ್ತೆ ಅದೇ ಪಾರ್ಟಿಯನ್ನು ಅಪ್ಪಿಕೊಳ್ಳಲು ನೋಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಎದುರಾಗುತ್ತಿವೆ. ಯಾಕೆಂದರೆ ಸದ್ಯದ ಬಂಗಾಳದ ರಾಜಕೀಯ ಮುನ್ನಡೆಯುತ್ತಿರುವ ರೀತಿಯನ್ನು ನೋಡಿದರೆ, ತೃಣಮೂಲ ಕಾಂಗ್ರೆಸ್ ಕವಲುದಾರಿಯಲ್ಲಿ ಸಾಗುತ್ತಿದೆ. ಪಕ್ಷವನ್ನು ಕಟ್ಟಿ ಬೆಳೆಸಿ, ಸತತ ಮೂರು ಅವಧಿಗೆ ಅಧಿಕಾರಕ್ಕೇರಿದ್ದ ಮಮತಾ ಬ್ಯಾನರ್ಜಿ ಮತ್ತು ಅವರ ಅಳಿಯನನ್ನೇ ಭಿನ್ನಮತೀಯರು ಎಂದು ಬಹುಪಾಲು ಟಿಎಂಸಿ ನಾಯಕರು ಹೇಳುತ್ತಿರುವುದು, ಮಮತಾ ಹಿನ್ನಡೆಗೆ ಆಗುತ್ತಿರುವ ಒಂದು ಉದಾಹರಣೆಯಾಗಿದೆ. ಇಪ್ಪತ್ತಕ್ಕೂ ಹೆಚ್ಚು ಸಂಸದರು, ಬಿಜೆಪಿ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿಗೆ ಆಸರೆಯಾಗುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ. 

ಹೀಗಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಮಮತಾ ಬ್ಯಾನರ್ಜಿಯವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಕಾಂಗ್ರೆಸ್ ಜೊತೆಗೆ ವಿಲೀನಗೊಳ್ಳುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ, ಮಮತಾ ಬ್ಯಾನರ್ಜಿಗೆ ಉಪಾಧ್ಯಕ್ಷ ಸ್ಥಾನ ಮತ್ತು ಅಭಿಷೇಕ್ ಬ್ಯಾನರ್ಜಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಫರ್ ಅನ್ನು ನೀಡಿದ್ದಾರೆಂದೆಲ್ಲಾ ಸುದ್ದಿಯಾಗುತ್ತಿದೆ. ಆದರೆ, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಿದೆ ಎಂದು ಮಮತಾ, ಸೋನಿಯಾಗೆ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

banner

You may also like