ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ಮಗುವಿಲ್ಲದ ದಂಪತಿಗೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯ ಹಾಗೂ ಮಗುವನ್ನು ಪಡೆದ ವ್ಯಕ್ತಿಯನ್ನು ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಡಾ। ಸುರೇಂದ್ರ ಕಾಮತ್, ಸಂತೆಕಟ್ಟೆ ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಬಂಧನಕ್ಕೊಳಗಾದವರು ಎಂದು ತಿಳಿದುಬಂದಿದೆ.
ಜೂ.19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಕಚೇರಿ (CDPO) ಅಧಿಕಾರಿಯೊಬ್ಬರು ಮಕ್ಕಳ ರಕ್ಷಣ ಘಟಕಕ್ಕೆ ಕರೆ ಮಾಡಿ, ಸಂತೆಕಟ್ಟೆಯ ನೇಜಾರಿನಲ್ಲಿ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣುಮಗುವನ್ನು ತಂದು ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ದೂರು ನೀಡಿದ್ದರು.
ದೂರು ಆಧರಿಸಿ ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ ಯೋಗೀಶ್, ಸುರಕ್ಷಾ ಜತೆ ವಲಯ ಮೇಲ್ವಿಚಾರಕಿ ದೂರು ನೀಡಿದ ಅಧಿಕಾರಿಯೊಂದಿಗೆ ನೇಜಾರಿಗೆ ತೆರಳಿದಾಗ ಅಲ್ಲಿ ದಂಪತಿ ಇರಲಿಲ್ಲ. ಬಳಿಕ ಮಾಹಿತಿ ಮೇರೆಗೆ ಸಂತೆಕಟ್ಟೆಯ ಸುಬ್ರಹ್ಮಣ್ಯನಗರದ ಮನೆಗೆ ತೆರಳಿದಾಗ ಪೂರ್ಣಿಮಾ, ಪತಿ ಪ್ರಕಾಶ್, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಹಿರಿಯ ಸಹೋದರಿ ಲಕ್ಷ್ಮೀ ಅವರು ಮನೆಯಲ್ಲಿ ಹಾಜರಿದ್ದರು.ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪಿಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದು, ಬಳಿಕ ಕೂಲಂಕಷವಾಗಿ ವಿಚಾರಿಸಿದಾಗ ನೈಜ ವಿಚಾರ ಬಾಯ್ದಿಟ್ಟಿದ್ದರು. ಇದೀಗ ಅವರು ಪೋಲೀಸರ ಅತಿಥಿಯಾಗಿದ್ದಾರೆ.

