Home » AP: ಹಾಲು ಉಕ್ಕಿಸಿದ ವಿಚಾರಕ್ಕೆ ಗಂಡ, ಹೆಂಡತಿಯ ನಡುವೆ ಜಗಳ – ಪತಿ ನೇಣಿಗೆ ಶರಣು!!

AP: ಹಾಲು ಉಕ್ಕಿಸಿದ ವಿಚಾರಕ್ಕೆ ಗಂಡ, ಹೆಂಡತಿಯ ನಡುವೆ ಜಗಳ – ಪತಿ ನೇಣಿಗೆ ಶರಣು!!

0 comments

AP: ಅಡುಗೆ ಮನೆಯ ಒಲೆಯಲ್ಲಿ ಕಾಯಲು ಇಟ್ಟ ಹಾಲನ್ನು ಎಷ್ಟೇ ಗಮನವಿಟ್ಟು ಆದರೂ ಕೂಡ ಅದು ಒಮ್ಮೊಮ್ಮೆ ಉಕ್ಕಿ ಬಿಡುತ್ತದೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಸಾಮಾನ್ಯ ವಿಚಾರ ಬಿಡಿ. ಆದರೆ ಈ ಹಾಲು ಉಕ್ಕುವ ಪ್ರಸಂಗವೇ ಒಂದು ಮನೆಯಲ್ಲಿ ಸಾವಿಗೆ ಕಾರಣವಾಗಿದೆ.

ಹೌದು, ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದ ಮನೆಯೊಂದರಲ್ಲಿ ಅಡುಗೆ ಮನೆಯಲ್ಲಿ ಕಾಯಲು ಇಟ್ಟ ಹಾಲು ಉಕ್ಕಿದ ವಿಚಾರಕ್ಕೆ ಗಂಡ ಹೆಂಡತಿಯ ನಡುವೆ ಗಲಾಟೆ ನಡೆದು ಗಂಡ ಆತ್ಮಹತ್ಯೆಗೆ ಶರಣಾಗಿರುವ ಅಘಾತಕಾರಿ ಘಟನೆ ನಡೆದಿದೆ.

ವೆಂಕಟ ಸುಬ್ಬಯ್ಯ (53) ಅವರು ಗಲ್ಫ್ ರಾಷ್ಟ್ರಗಳಲ್ಲಿ ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ಇತ್ತೀಚೆಗಷ್ಟೇ ಮನೆಗೆ ಮರಳಿದ್ದರು. ಪತ್ನಿ ಅನುರಾಧ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖ ಸಂಸಾರ ನಡೆಸಲು ಊರಿನಲ್ಲೇ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಭಾನುವಾರ ಎಂದಿನಂತೆ ಅನುರಾಧ ಒಲೆಯ ಮೇಲೆ ಹಾಲು ಇಟ್ಟಿದ್ದರು. ಯಾವುದೋ ಕೆಲಸದ ನಡುವೆ ಅವರು ಹಾಲಿನ ಕಡೆಗೆ ಗಮನ ಹರಿಸಲಿಲ್ಲ. ಹಾಲು ಕುದಿದು ಒಲೆಯ ಮೇಲೆ ಚೆಲ್ಲಿತು. ಇದನ್ನು ನೋಡಿದ ವೆಂಕಟ ಸುಬ್ಬಯ್ಯ ಅವರಿಗೆ ಕೋಪ ಬಂದಿತು. ಎಷ್ಟು ಬಾರಿ ಹೇಳಿದರೂ ನಿನಗೆ ಬುದ್ಧಿ ಬರುವುದಿಲ್ಲವೇ ಎಂದು ಕಿರುಚುತ್ತಾ, ಆ ಕ್ಷಣದ ಆವೇಶದಲ್ಲಿ ತನ್ನ ತಲೆಯನ್ನು ತಾನೇ ಗೋಡೆಗೆ ಚಚ್ಚಿಕೊಂಡರು.

ಪತಿಯ ಈ ಉಗ್ರ ರೂಪ ಮತ್ತು ರಕ್ತ ನೋಡಿ ಹೆದರಿದ ಅನುರಾಧ, ಗಂಡನ ಕೋಪ ಇಳಿಯಲಿ, ಅವರು ಕೊಂಚ ಸಮಾಧಾನಗೊಳ್ಳಲಿ ಎಂದುಮನೆಯಿಂದ ಹೊರಬಂದು ಕುಳಿತರು. ಪತ್ನಿ ಹೊರಗೆ ಹೋಗಿದ್ದನ್ನು ಕಂಡ ಸುಬ್ಬಯ್ಯ ಅವರ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಅನುರಾಧ ಹೊರಗೆ ಹೋದ ಕೆಲವೇ ನಿಮಿಷಗಳಲ್ಲಿ, ಮನೆಯೊಳಗೆ ವೆಂಕಟ ಸುಬ್ಬಯ್ಯ ಫ್ಯಾನ್‌ಗೆ ನೇಣು ಬಿಗಿದುಕೊಂಡರು. ಸ್ವಲ್ಪ ಸಮಯದ ನಂತರ ಅನುರಾಧ ಒಳಗೆ ಹೋದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಯಾಕೆಂದರೆ ಗಂಡನ ಶವ ಎದುರುಗಡೆ ನೇತಾಡುತ್ತಿತ್ತು.

banner

ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಸುಬ್ಬಯ್ಯ ಅವರನ್ನು ಕೆಳಗೆ ಇಳಿಸಿದರೂ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಒಂದು ಲೀಟರ್ ಹಾಲು ಚೆಲ್ಲಿತು ಎಂಬ ಸಣ್ಣ ಕಾರಣ, ಒಬ್ಬ ವ್ಯಕ್ತಿಯ ಜೀವವನ್ನೇ ಬಲಿಪಡೆದು, ಇಬ್ಬರು ಹೆಣ್ಣು ಮಕ್ಕಳನ್ನು ಅನಾಥರನ್ನಾಗಿ ಮಾಡಿತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

You may also like