ಮೈಸೂರು: ನಗರದ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲಿಯೇ ಹೃದಯಾಘಾತ ಉಂಟಾಗಿದ್ದು, ಎರಡು ಬಾರಿ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಸಾವಿಗೀಡಾಗಿದ್ದಾರೆ.


ಮದ್ದೂರು ತಾಲೂಕು ಯರಗನಹಳ್ಳಿಯ ವೈ ಕೆ ಮಾದೇಶ್ ಮೃತಪಟ್ಟ ವಿದ್ಯಾರ್ಥಿ.
ಮೈಸೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಕ್ಕನ ಜೊತೆ ಮನೆ ಮಾಡಿಕೊಂಡು ಓದುತ್ತಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ತರಗತಿಯಿಂದ ಹೊರಬಂದ ಮಾದೇಶ್ 2.05 ಕ್ಕೆ ಕಾಲೇಜು ಆವರಣದಲ್ಲಿಯೇ ಕುಸಿದು ಬಿದ್ದಿದ್ದರು. ಹಿಂದಿನಿಂದ ಬಂದ ವಿದ್ಯಾರ್ಥಿಗಳು ಆತನನ್ನು ಮೇಲೆತ್ತಿದ್ದು, ಮಾದೇಶ್ ಒಂದೆರಡು ಹೆಜ್ಜೆ ಹಾಕಿದ್ದು, ಮತ್ತೆ ಕುಸಿದು ಬಿದ್ದಿದ್ದರು.
ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪೋಷಕರಿಗೆ ಕೂಡಾ ಕರೆ ಮಾಡಲಾಗಿತ್ತು. ವೈದ್ಯರ ಪ್ರಯತ್ನದ ನಂತರವೂ ಮಾದೇಶ್ ಬದುಕುಳಿಯಲಿಲ್ಲ. ಮಾದೇಶ್ ಹೃದಯದಲ್ಲಿ ರಂದ್ರ ಪತ್ತೆಯಾಗಿತ್ತು. ಅದಕ್ಕೆ ಪೋಷಕರು ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದು ಬಂದಿದೆ.

