Home » ‘ನಾನು ನಿರ್ದೋಷಿʼ ಭಾವುಕ ಪೋಸ್ಟ್‌ ಹಂಚಿಕೊಂಡ ಚೈತ್ರಾ ಕುಂದಾಪುರ, ಕಾನೂನು ಹೋರಾಟದಲ್ಲಿ ಜಯ!

‘ನಾನು ನಿರ್ದೋಷಿʼ ಭಾವುಕ ಪೋಸ್ಟ್‌ ಹಂಚಿಕೊಂಡ ಚೈತ್ರಾ ಕುಂದಾಪುರ, ಕಾನೂನು ಹೋರಾಟದಲ್ಲಿ ಜಯ!

0 comments
Chaitra assult

ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಕಳೆದ ಒಂಭತ್ತು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ತಮ್ಮ ಮೇಲಿದ್ದ ಐದು ಪ್ರರಕಣಗಳಿಂದ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದು, ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟನ್ನು ಹಂಚಿದ್ದಾರೆ.

ಚೈತ್ರಾ ಕುಂದಾಪುರ ತಮ್ಮ ಪೋಸ್ಟ್‌ನಲ್ಲಿ ಬರೆದಿರುವುದೇನು?
‘ಏ ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ ಲೇ’ ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ. 9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹೌದು, ಇವೆಲ್ಲವೂ ಒಂದು ಚಿಂತನೆಗಾಗಿ, ಒಂದು ಪಕ್ಷಕ್ಕಾಗಿ ಹಾಕಿಸಿಕೊಂಡದ್ದು. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ… ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ’ ಎಂದು ಚೈತ್ರಾ ಬರೆದುಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:
2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ಗಂಗಾವತಿ ಕ್ಷೇತ್ರದಲ್ಲಿ ಹಿಂದುತ್ವ ಮತ್ತು ಬಿಜೆಪಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣಿಗಳ ಜೊತೆ ವಿವಾದ ಉಂಟಾಗಿತ್ತು. ಪ್ರಚಾರದ ಸಂದರ್ಭದಲ್ಲಿ ಚೈತ್ರಾ ವಿರುದ್ಧ ತೇಜೋವಧೆ ಹಾಗೂ ಚಾರಿತ್ರ್ಯ ಹತ್ಯೆ ಮಾಡಲಾಗಿತ್ತು. ಅಂದಿನ ಶಾಸಕ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿ ನಡುವಿನ ರಾಜಕೀಯ ಸಮರದಲ್ಲಿ ಚೈತ್ರಾ ಕುಂದಾಪುರ ಟಾರ್ಗೆಟ್‌ ಆಗಿದ್ದರು. ಪರ ವಿರೋಧ ಹಾಗೂ ಧರ್ಮದ ಕುರಿತ ಅವಹೇಳನ ಇತ್ಯಾದಿ ದೂರುಗಳು ದಾಖಲಾಗಿದ್ದವು.

ಇದೀಗ ಒಂಭತ್ತು ವರ್ಷ ನಡೆದ ಈ ಸುದೀರ್ಘ ಹೋರಾಟಕ್ಕೆ ಮುಕ್ತಿ ದೊರಕಿದೆ. ಚೈತ್ರಾ ಕುಂದಾಪುರ ಅವರು ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪನ್ನು ನೀಡಿದೆ. ‘ಇಂದು ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲದೆ ನಾನು ‘ಅಕ್ಕಾ’ ಎಂದು ಕರೆಸಿಕೊಳ್ಳುತ್ತಿದ್ದೇನೆ. ಇದುವೇ ನನಗೆ ಸಿಕ್ಕ ಬಹುದೊಡ್ಡ ಪ್ರೀತಿ’ ಎಂದು ಚೈತ್ರಾ ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.

banner

You may also like