ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಬರೋಬ್ಬರಿ 11ಮಂದಿ ರೋಗಿಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ದಿಢೀರ್ ಸಾವನ್ನಪ್ಪಿದ್ದಾರೆ.


ಆಸ್ಪತ್ರೆಯಲ್ಲಿ ಕಳೆದ 2 ದಿನಗಳಲ್ಲಿ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸರಿಯಾದ ಸಮಯಕ್ಕೆ ವೈದ್ಯರು ಆಸ್ಪತ್ರೆಗೆ ಬರ್ತಿಲ್ಲ. ನೈಟ್ ಶಿಫ್ಟ್ ನಲ್ಲೇ ಡಾಕ್ಟರ್ ಗಳು ಇರಲ್ಲ. ಬೆಳಗ್ಗೆ ಶಿಫ್ಟ್ ನಲ್ಲೂ ಕೂಡ ಸರಿಯಾದ ಸಮಯಕ್ಕೆ ವೈದ್ಯರು ಬರದೆ ರೋಗಿಗಳಿಗೆ ಹಾಗೂ ಎಮರ್ಜೆನ್ಸಿ ಕೇಸ್ ಗಳಿಗೆ ತೊಂದರೆ ಆಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಾವು ಆಸ್ಪತ್ರೆಯ ಇತರ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ರೋಗಿಗಳ ಸರಣಿ ಸಾವಿನ ಬೆನ್ನಲ್ಲೇ ಮೃತರ ಸಂಬಂಧಿಕರು ಆಸ್ಪತ್ರೆ ಮಂಡಳಿ ಮತ್ತು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಕಣ್ಮುಂದೆಯೇ 5 ರಿಂದ 6 ಜನ ಸತ್ತಿದ್ದಾರೆ. ರಾತ್ರಿಯಿಂದ ಬೆಳಗ್ಗೆವರೆಗೂ ಸಾವುಗಳು ಸಂಭವಿಸುತ್ತಿದ್ದರೂ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಎಮರ್ಜೆನ್ಸಿ ಟೈಮ್ನಲ್ಲಿ ವೈದ್ಯರೇ ಇರುವುದಿಲ್ಲ ಎಂದರೆ ಹೇಗೆ? ಎಂದು ರೋಗಿಯೊಬ್ಬರ ಸಂಬಂಧಿ ಪ್ರಶ್ನಿಸಿದ್ದಾರೆ.ಅಲ್ಲದೆ, ವೈದ್ಯರ ಫೋನ್ ನಂಬರ್ ಕೇಳಿದರೆ ಕೊಡುತ್ತಿಲ್ಲ. ಚಿಕಿತ್ಸೆಯಲ್ಲಿ ಏನಾಗುತ್ತಿದೆ ಎಂಬ ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ. ಈ ಸಾವುಗಳಿಗೆ ಹೊಣೆ ಯಾರು? ಎಂದು ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ವಿವರಿಸಿದ ಡಾ. ಸದಾನಂದ, “ನಮ್ಮ ಆಸ್ಪತ್ರೆಗೆ ಕೇವಲ ಮೈಸೂರಷ್ಟೇ ಅಲ್ಲದೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯ ಹೃದ್ರೋಗ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಆದರೆ, ಪರಿಸ್ಥಿತಿ ಅತ್ಯಂತ ಗಂಭೀರವಾದಾಗ ಮಾತ್ರ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗುತ್ತದೆ. ನಿನ್ನೆ ಮೃತಪಟ್ಟ 11 ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು” ಎಂದು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿರುವುದು ನಿಜ ಎಂದು ಒಪ್ಪಿಕೊಂಡಿರುವ ಅಧೀಕ್ಷಕರು, ಸಾವಿಗೆ ನಿಖರ ಕಾರಣ ಬಿಚ್ಚಿಟ್ಟಿದ್ದಾರೆ. “ಮೃತಪಟ್ಟವರೆಲ್ಲರೂ ತೀವ್ರ ಹೃದಯಾಘಾತ (Severe Heart Attack), ಹೃದಯ ವೈಫಲ್ಯ (Heart Failure) ಹಾಗೂ ವಯೋಸಹಜ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ” ಎಂದು ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

