ಉಳ್ಳಾಲ, ಜೂನ್ 21: ಅತಿಯಾದ ವೇಗದ ಬೈಕ್ ಚಾಲನೆಯಿಂದ ಟ್ರಕ್ ಒಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವ ಘಟನೆಯೊಂದು ಬೆಳಗ್ಗೆ ಎಕ್ಕೂರು ರೈಲ್ವೇ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಯುವಕ ಸಾವಿಗೀಡಾಗಿರುವ ಕುರಿತು ವರದಿಯಾಗಿದೆ.


ಮೂಲತಃ ಕೇರಳ ಪಾನತ್ತೂರು ನಿವಾಸಿ ಹಾಲಿ ಮಂಗಳೂರಿನ ಉರ್ವ, ಚಿಲಿಂಬಿಯ ಮಾನಸ ರೆಸಿಡೆನ್ಸಿಯಲ್ಲಿ ವಾಸವಿದ್ದ ಸುಧೀಶ್ ಸಿ.ಕೆ (26) ಮೃತಪಟ್ಟ ಯುವಕ. ಮಂಗಳೂರಿನಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಸುಧೀಶ್ ಭಾನುವಾರ ಮುಂಜಾನೆ ಕೇರಳದ ಪಾಣತ್ತೂರಿನಿಂದ ತನ್ನ ಬೈಕಲ್ಲಿ ಮಂಗಳೂರಿಗೆ ಅತಿಯಾದ ವೇಗದಿಂದ ಹೋಗುತ್ತಿದ್ದು, ಈ ವೇಳೆ ಎಕ್ಕೂರಿನ ರೈಲ್ವೇ ಮೇಲ್ಸೇತುವೆಯಲ್ಲಿ ಮುಂದಿನಿಂದ ಸಾಗುತ್ತಿದ್ದ ಭಾರೀ ಗಾತ್ರದ ಈಚರ್ ಟಿಪ್ಪರ್ ಟ್ರಕ್ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು.
ಅಪಘಾತದ ತೀವ್ರತೆಗೆ ರಸ್ತೆಯಲ್ಲಿ ಸುಧೀಶ್ ತಲೆಭಾಗದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಯುವಕ ಸಾವಿಗೀಡಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
