ಮಂಗಳೂರು: ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ “ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ” (ಕೆ-ಕೋಕಾ) ಅಡಿಯಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಕೆ-ಕೋಕಾ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


ಜಾಮೀನು ಪಡೆದ ಆರೋಪಿಗಳು ಶ್ಯಾಮ್ ಸುಂದರ್ ಶೆಟ್ಟಿ, ಸುವಿನ್ ಕಾಂಚನ್ ಅಲಿಯಾಸ್ ಮುನ್ನ ಹಾಗೂ ಅಕ್ಷಯ್ ಎಂದು ತಿಳಿದು ಬಂದಿದೆ.
2026ರ ಜ.1 ರಂದು ಸಂಜೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಘಟನೆ ನಡೆದಿತ್ತು.
ದೂರುದಾರರಾದ ಸಹಜುದ್ದೀನ್ ಅವರು ತಮ್ಮ ತಂದೆಯೊಂದಿಗೆ ಜಗ್ಗು ಶೆಟ್ಟಿ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಂಬಳದ ಕೋಣಗಳಿಗೆ ಎಣ್ಣೆ ಮಾಲೀಶ್ ಮಾಡುತ್ತಿದ್ದರು. ಈ ಸಂದರ್ಭ ಬಿಳಿ ಬಣ್ಣದ ಕಾರಿನಲ್ಲಿ ಕಬ್ಬಿಣದ ರಾಡ್ಗಳೊಂದಿಗೆ ಬಂದ ಆರೋಪಿಗಳು, ಕೊಟ್ಟಿಗೆಗೆ ಅಕ್ರಮವಾಗಿ ನುಗ್ಗಿದ್ದರು.
ಕೋಣಗಳು ಕಂಬಳದಲ್ಲಿ ಗೆದ್ದಿರುವ ಬಗ್ಗೆ ಪ್ರಸ್ತಾಪಿಸಿದ ಆರೋಪಿಗಳು, ಸಹಜುದ್ದೀನ್ ಅವರ ಬಳಿ 50,000 ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಹಣ ನೀಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು, ಆರೋಪಿಗಳು ದೂರುದಾರರ ಮೇಲೆ ಕೈಯಿಂದ ಹಾಗೂ ರಾಡ್ನಿಂದ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ದೃಶ್ಯವನ್ನು ಸಹಜುದ್ದೀನ್ ಅವರು ತಮ್ಮ ಮೊಬೈಲ್ನಲ್ಲಿ ವೀಡಿಯೊ ಮಾಡಲು ಮುಂದಾದಾಗ, ಆರೋಪಿಗಳು ಅವರಿಗೂ ಹಾಗೂ ಅವರ ತಂದೆಗೂ ಜೀವ ಬೆದರಿಕೆಯೊಡ್ಡಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಸಹಜುದ್ದೀನ್ ಅವರು ಮುಲ್ಕಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ತನಿಖೆಯ ವೇಳೆ ಆರೋಪಿಗಳು ವ್ಯವಸ್ಥಿತವಾಗಿ ಸಂಘಟಿತ ಅಪರಾಧಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಈ ಪ್ರಕರಣಕ್ಕೆ ಕಠಿಣವಾದ ‘ಕೆ-ಕೋಕಾ’ ಕಾಯ್ದೆಯನ್ನು ಅಳವಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತರುವಾಯ ಪ್ರಕರಣವನ್ನು ಮೈಸೂರಿನ ಕೆ-ಕೋಕಾ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು ಎಂದು ತಿಳಿದು ಬಂದಿದೆ.
ಆರೋಪಿಗಳ ಪರವಾಗಿ ಪ್ರಖ್ಯಾತ ಕಾನೂನು ಸಂಸ್ಥೆ ಪುತ್ತೂರಿನ ‘ಕಜೆ ಲಾ ಚೇಂಬರ್ಸ್’ನ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ, ಪ್ರಸಾದ್ ಕುಮಾರ್ ಹಾಗೂ ರಾಘವೇಂದ್ರ ಸಿ.ವಿ. ಅವರು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಕೆಕೋಕಾ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಬಂಧಿತರ ಪರ ವಕೀಲರ ಸುದೀರ್ಘ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು, ಜೂನ್ 2 ರಂದು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

