ಕಿಚ್ಚ ಸುದೀಪ್ ಅಕ್ಕನ ಮಗ, ಸೋದರಳಿಯ ಸಂಚಿತ್ ನಟಿಸಿರುವ ಮ್ಯಾಂಗೋ ಪಚ್ಚ ಕಳೆದ ಶುಕ್ರವಾರ ಬಿಡುಗಡೆಯಾಗಿ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ನೋಡಿದ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ. ಆದರೆ ಈಗ ಇದಕ್ಕೆ ನೆಪೋಟಿಸಮ್ ರೂಪ ನೀಡಲಾಗುತ್ತಿದೆ. ಇದಕ್ಕೆ ಸುದೀಪ್ ಅವರು ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್ಕುಮಾರ್ ಅವರ ಮಕ್ಕಳಿಗೂ ಕೇಳಬೇಕು ಎಂದಿದ್ದರು. ಈ ವಿಚಾರವಾಗಿ ಇದೀಗ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.


ಹೌದು, ಮ್ಯಾಂಗೋ ಚಿತ್ರ ಜನರಿಗೆ ಇಷ್ಟವಾದ ಕಾರಣ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ನಿನ್ನೆ ( ಜೂನ್ 6 ) ಹಮ್ಮಿಕೊಂಡಿತ್ತು. ಚಿತ್ರಕ್ಕೆ ಸುದೀಪ್ ಪತ್ನಿ ಸಹ ಬಂಡವಾಳ ಹಾಕಿದ್ದು, ಸುದೀಪ್ ಸಹ ಹಾಜರಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೂ ಸಹ ಹಲವಾರು ಮಂದಿ ನಿಮ್ಮನ್ನು ನೆಪೋಟಿಸಂ ಹೆಸರಿನಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಮ್ಯಾಂಗೋ ಪಚ್ಚ ಎಂದರೆ, ಅರೇ ಏನಪ್ಪ ಸುದೀಪ್ ಮಗಳು, ಸುದೀಪ್ ಅಕ್ಕನ ಮಗ ಬರೀ ನೆಪೋಟಿಸಂ ಆಯ್ತು ಎನ್ನುತ್ತಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ. ಇದು ಸಹಜವಾಗಿ ಇದು ಸುದೀಪ್ ಅವರನ್ನು ಕೆರಳಿಸಿತ್ತು.
ಆಗ ಸುದೀಪ್ ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್ಕುಮಾರ್ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ? ಬಾಂಬೆಯಲ್ಲಿ ನೆಪೋಟಿಸಂ ಪದ ಹುಟ್ಟಿಕೊಂಡಿತು ಅಂತ ಕರ್ನಾಟಕಕ್ಕೂ ಅದನ್ನು ತರಬೇಡಿ. ನಮ್ಮಲ್ಲಿ ರಾಜ್ಕುಮಾರ್ ಕಾಲದಿಂದಲೇ ಕಲೆ ಒಲಿದು, ಯೋಗ್ಯತೆ ಇದ್ದು, ಕರ್ನಾಟಕದ ಜನತೆ ಅವರನ್ನು ಇಷ್ಟಪಟ್ಟರೆ ಇದು ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇಲ್ಲಿ ಕುಳಿತುಕೊಂಡು ಮುಂಬೈನ ಒಂದು ಪದವನ್ನು ಬಳಸುವುದು ತಪ್ಪಾಗುತ್ತೆ. ಇವತ್ತಿಗೆ ಶಿವರಾಜ್ಕುಮಾರ್ ಅವರು ಓರ್ವ ಮೇರುನಟರು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ, ಅವರನ್ನು ನೋಡಿ ಎಷ್ಟೋ ಜನ ಬೆಳೆಯುತ್ತಿದ್ದಾರೆ. ನಮ್ಮ ಮಧ್ಯ ಅಪ್ಪು ಅವರು ನಮ್ಮ ಮಧ್ಯ ಅಪ್ಪು ಅವರು ಇರದೇ ಇರಬಹುದು, ಅದ್ಭುತವಾದ ಪ್ರತಿಭೆ. ನೆಪೋಟಿಸಂ ಎಂಬುದು ಅವರಿಗೆ ಬರಕೂಡದು. ಅವರಿಂದ ಎಷ್ಟೋ ಜನ ಕಲಾವಿದರು ಬೆಳೆಯುತ್ತಿದ್ದಾರೆ ಎಂದಿದ್ದರು.
ಇದೇ ಮ್ಯಾಂಗೋ ಪಚ್ಚ ಚಿತ್ರ ನೋಡಲು ಬಂದ ಶಿವರಾಜ್ ಕುಮಾರ್ ಚಿತ್ರ ನೋಡಿದ್ದಾರೆ. ಆ ಬಳಿಕ ಮಾಧ್ಯಮದ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಸುದೀಪ್ ಅವರ ನೆಪೋಟಿಸಂ ವಿವರಣೆಯ ಕುರಿತಾದ ಪ್ರಶ್ನೆಯನ್ನು ಶಿವಣ್ಣನವರಿಗೆ ಮಾಧ್ಯಮದವರು ಕೇಳಿದ್ದಾರೆ. ಆಗ ಶಿವಣ್ಣ “ನೆಪೊಟಿಸಂ ಅನ್ನುವ ಪ್ರಶ್ನೆ ಕೇಳಿದ್ಯಾಕೆ? ಈ ಪ್ರಶ್ನೆ ಕೇಳಿರೋದೇ ತಪ್ಪು. ಎಲ್ಲರಿಗೂ ಆಸೆ ಇರೋದಿಲ್ವೇ? ಎಲ್ಲರಿಗೂ ಕನಸು ಇರೋದಿಲ್ವೇ ? ಎಲ್ಲರು ಸಿನಿಮಾಗಳನ್ನ ಮಾಡಬಹುದು. ಆದರೆ, ಈ ಪ್ರಶ್ನೆ ಕೇಳಿರೋದೇ ತಪ್ಪು. ಅದಕ್ಕೂ ಹೆಚ್ಚಾಗಿ ಸುದೀಪ್ ಹೇಳಿರೋದಕ್ಕೆಲ್ಲ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಇದೆಲ್ಲ ಏನೂ ಅಲ್ಲ. ಇದರ ಬಗ್ಗೆ ನಾನು ಯೋಚನೆ ಕೂಡ ಮಾಡೋದಿಲ್ಲ” ಎಂದಿದ್ದಾರೆ.

