ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ರಾತ್ರಿ ಶೆಡ್ನಲ್ಲಿ ಮಲಗಿದ್ದ 50 ಕ್ಕೂ ಹೆಚ್ಚು ಕುರಿಗಳ ಮೇಲೆ ದುಷ್ಕರ್ಮಿಗಳು ಚಾಕು ಮಚ್ಚುಗಳಿಂದ ದಾಳಿ ಮಾಡಿದ್ದು, ಐದು ಕುರಿಗಳು ಸತ್ತಿದ್ದು, ಉಳಿದ ಕುರಿಗಳ ಸ್ಥಿತಿ ಗಂಭೀರವಾಗಿದೆ.


ಕುರಿ ಸಾಕಾಣೆಯಿಂದ ಜೀವನ ನಡೆಸುತ್ತಿದ್ದ ದೊಡ್ಡತಿಮ್ಮರಾಯಪ್ಪ ಎಂಬ ಬಡ ರೈತನಿಗೆ ಸೇರಿದ ಕುರಿಗಳು ಅವು. ಕುರಿಗಳ ಮೇಲೆ ಮನಬಂದಂತೆ ದಾಳಿ ಮಾಡಲಾಗಿದೆ. ರಾತ್ರಿ ದಾಳಿ ಮಾಡಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಹೀಗಾಗಿ ರಾತ್ರಿಯೆಲ್ಲ ಕುರಿಗಳು ರಕ್ತಸ್ರಾವದಿಂದ ನರಳಾಡಿದೆ. ಬೆಳಗ್ಗೆ ಎಂದಿನಂತೆ ಮಾಲೀಕ ಕೊಟ್ಟಿಗೆಗೆ ಬಂದಾಗ ರಕ್ತಸಿಕ್ತವಾಗಿ ಬಿದ್ದ ಕುರಿಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಾಸ್ತಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
