ಮಗಳು ಕಪ್ಪಾಗಿದ್ದಾಳೆ ಎಂದು ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯೇ ತನ್ನ 6 ವರ್ಷದ ಮಗಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆಶ್ಚರ್ಯವೇನೆಂದರೆ ಇದನ್ನು ಪತ್ತೆ ಹಚ್ಚಿದ್ದು ವಿದೇಶಿಯ ಒಬ್ಬಳು ವೈದ್ಯೆ.


ವೆನ್ನಲಾ (6) ಕೊಲೆಯಾದ ದುರ್ದೈವಿ ಬಾಲಕಿ. ಮಗುವಿನ ಕೊಲೆಗೆ ಅಕ್ರಮ ಸಂಬಂಧ ಹಾಗೂ ಮಗುವಿನ ಚರ್ಮದ ಬಣ್ಣವೇ ಕಾರಣ ಎಂದು ಆರೋಪಿಸಲಾಗಿದೆ. ಮಗು ಸಾವನ್ನಪ್ಪಿದ ಮೂರು ತಿಂಗಳ ಬಳಿಕ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ಪ್ರವೀಣ್ ನೀಡಿದ ದೂರಿನ ಮೇರೆಗೆ ಪತ್ನಿ ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮೋಹನ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಇಬ್ಬರು ಹೆಣ್ಣುಮಕ್ಕಳೊಂದಿಗೆ ಸುಖವಾಗಿದ್ದ ಸಂಸಾರದಲ್ಲಿ ಹಳೇ ಸ್ನೇಹಿತ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದ. ಕೆಲವು ವರ್ಷಗಳ ಹಿಂದಿನಿಂದಲೇ ಪ್ರಿಯಾಂಕ ತನ್ನ ಕಾಲೇಜು ದಿನಗಳ ಗೆಳೆಯನಾದ ಮೋಹನ್ ಜೊತೆ ಮತ್ತೆ ಸಂಪರ್ಕ ಸಾಧಿಸಿದ್ದಾಳೆಂದು ಗಂಡ ಆರೋಪ ಮಾಡಿದ್ದಾರೆ. ಇವರಿಬ್ಬರ ನಡುವಿನ ಆಪ್ತ ಸಂಪರ್ಕ ಬಗ್ಗೆ ಪ್ರವೀಣ್ ಪ್ರಶ್ನಿಸಿದಾಗ, ಪ್ರಿಯಾಂಕ ಡಿವೋರ್ಸ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ.
ನಂತರ ಪ್ರಿಯಾಂಕ ಕಾಡುಗೋಡಿಯಲ್ಲಿ ಮೋಹನ್ ಜೊತೆ ವಾಸವಿದ್ದಳು. ಜೊತೆಗೆ ಕಿರಿಯ ಮಗಳು ವೆನ್ನಿಲಾ ಕೂಡ ಅವರ ಜೊತೆ ಇದ್ದಳು ಎನ್ನಲಾಗಿದೆ. ಮಾರ್ಚ್ 24ರಂದು ವೆನ್ನಿಲಾ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾಳೆ. ಮಗುವಿನ ಸಾವಿನ ಬಗ್ಗೆ ಕೇಳಿದಾಗ, ಪ್ರಿಯಾಂಕ ನೀಡಿದ ವಿವರ ತಂದೆಗೆ ಇನ್ನಷ್ಟು ಅನುಮಾನ ಹುಟ್ಟುವಂತೆ ಮಾಡಿತು. ಒಂದು ಬಾರಿ ಮಗುವಿಗೆ ಬಿರಿಯಾನಿ ಕೊಟ್ಟಿದ್ದೆ, ಮತ್ತೊಮ್ಮೆ ಐಸ್ ಕ್ರೀಂ ಕೊಟ್ಟು, ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆ. ರಾತ್ರಿ ಮನೆಗೆ ಹೋದಮೇಲೆ ಬೆಳಗ್ಗೆ ನೋಡಿದಾಗ ಮಗು ಸತ್ತಿತ್ತು ಎಂದು ಅವಳು ಹೇಳಿದ್ದಾಳೆ ಎಂದು ಗಂಡ ಪ್ರವೀಣ್ ಆರೋಪ ಮಾಡಿದ್ದಾರೆ. ನಂತರ ಮಗುವಿನ ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಂ) ನಡೆದಿದ್ದು, ಅದರ ರಿಪೋರ್ಟ್ ಏಪ್ರಿಲ್ 4ರಂದು ಪ್ರವೀಣ್ ಕೈಗೆ ಸಿಕ್ಕಿತು.
ವಿದೇಶದ ವೈದ್ಯೆ ನೀಡಿದ ಸುಳಿವಿನಿಂದ ಬಯಲಾದ ರಹಸ್ಯ:
ಮಗುವಿನ ಸಾವಿನ ಬಗ್ಗೆ ತಂದೆ ಪ್ರವೀಣ್ಗೆ ತೀವ್ರ ಅನುಮಾನ ಕಾಡಿತ್ತು. ಹೀಗಾಗಿ ಮಗುವಿನ ಮರಣೋತ್ತರ ಪರೀಕ್ಷೆಯ (Post-mortem) ವರದಿಯನ್ನು ವಿದೇಶದಲ್ಲಿದ್ದ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿಕೊಟ್ಟಿದ್ದರು. ವರದಿಯನ್ನು ಪರಿಶೀಲಿಸಿದ ಆ ವೈದ್ಯೆ, ಮಗುವಿನ ಸಾವಿನಲ್ಲಿ ಏನೋ ದೊಡ್ಡ ತಪ್ಪು ನಡೆದಿದೆ, ಇದು ಸಹಜ ಸಾವಲ್ಲ ಎಂಬ ಸುಳಿವು ನೀಡಿದ್ದಾರೆ.
ವೈದ್ಯರ ಮಾತು ಕೇಳಿ ದಿಕ್ಕಿಟ್ಟ ತಂದೆ ಪ್ರವೀಣ್, ಪ್ರಿಯಕರನ ಜೊತೆ ಬಾಳಲು ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಮತ್ತು ಮಗುವಿನ ಬಣ್ಣದ ವಿಚಾರವಾಗಿ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸೇರಿ ಮಗುವಿಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

