ಮಂಗಳೂರು, ಎ.28: ಉಳ್ಳಾಲ ಮುಕ್ಕಚ್ಚೇರಿ ನಿವಾಸಿ, ಬಿಜೆಪಿ ಕಾರ್ಯಕರ್ತ ಜುಬೇರ್ ಎನ್ನುವಾತನನ್ನು ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪಾತ್ರ ಸಾಬೀತಾಗಿದ್ದು, ಪ್ರಧಾನ ಅಪರಾಧಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಅಬ್ದುಲ್ ರಹಿಮಾನ್ ಸುಹೇಲ್ (23) ಶಿಕ್ಷೆಗೊಳಗಾದ ಅಪರಾಧಿ. ಇನ್ನುಳಿದ ಆರೋಪಿಗಳಿಗೆ 2022 ರಲ್ಲಿ ಶಿಕ್ಷೆ ಪ್ರಕಟಗೊಂಡಿತ್ತು.
2017 ರ ಅಕ್ಟೋಬರ್ 4 ರಂದು ರಾತ್ರಿ 7.55 ಕ್ಕೆ ಮುಕ್ಕಚ್ಚೇರಿ ಮಸೀದಿ ಎದುರು ಜುಬೇರ್ ತನ್ನ ಗೆಳೆಯ ಇಲಿಯಾಸ್ ಜೊತೆ ಮಾತನಾಡುತ್ತಿದ್ದಾಗ ಆರೋಪಿಗಳಾದ ಸುಹೇಲ್, ನಿಜಾಮ್, ಮುಸ್ತಾಫ, ಅಲ್ತಾಫ್, ಆಸಿಫ್, ನಾಸೀರ್ ಸೇರಿ ತಲ್ವಾರ್ ಕತ್ತಿಯಿಂದ ಜುಬೇರ್ಗೆ ಕಡಿದು ಕೊಲೆ ಮಾಡಿದ್ದರು. ಈ ಸಂದರ್ಭದಲ್ಲಿ ತಡೆಯಲು ಬಂದ ಇಲಿಯಾಸ್ ಅವರಿಗೂ ತಲವಾರಿನಿಂದ ಕಡಿದು ತೀವ್ರ ಗಾಯ ಮಾಡಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎ.20,2022 ರಂದು ಜುಬೇರ್ ಕೊಲೆ ಪ್ರಕರಣವನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಮಗ್ರ ವಿಚಾರಣೆ ನಡೆಸಿದ್ದು, ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದರು. 2ರಿಂದ 4 ನೇ ಆರೋಪಿಗಳಾದ ನಿಜಾಮ್, ತಾಜುದ್ದೀನ್, ಮುಸ್ತಾಫ ಎಂಬುವರಿಗೆ ಜೀವಾವಧಿ ಶಿಕ್ಷೆ ನೀಡಿದ್ದರೆ, 6ನೇ ಆರೋಪಿ ಅಸಿಫ್ ಮತ್ತು 7ನೇ ಆರೋಪಿ ನಾಸೀರ್ ಖುಲಾಸೆಗೊಂಡಿದ್ದಾಗಿ ತೀರ್ಪು ಪ್ರಕಟ ಮಾಡಿದ್ದರು. 5ನೇ ಆರೋಪಿ ಅಲ್ತಾಫ್ ಈ ನಡುವೆ ಮೃತಪಟ್ಟಿದ್ದ.
ಪ್ರಮುಖ ಆರೋಪಿ ಮುಕ್ಕಚ್ಚೇರಿ ನಿವಾಸಿ ಅಬ್ದುಲ್ ರಹಿಮಾನ್ ಸುಹೇಲ್ ತಲೆಮರೆಸಿಕೊಂಡಿದ್ದ. ನಾಲ್ಕು ತಿಂಗಳ ಹಿಂದೆ ಆತನನ್ನು ಬಂಧನ ಮಾಡಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

