ಪುತ್ತೂರಿನ ಬಿಜೆಪಿಯನ್ನು ಶುದ್ಧೀಕರಿಸುವುದು ನನ್ನ ಕೆಲಸವಲ್ಲ. ಅದು ನನ್ನ ಲೆವೆಲ್ ಗೂ ಇಲ್ಲ. ನನಗಿಂತ ಸಣ್ಣ ಲೆವೆಲ್ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿದ್ದು ಬಾರಿ ಚರ್ಚೆಗೆ ಕಾರಣವಾಗಿದೆ.


ನಿನ್ನೆ ಮಾಜಿ ಸಿಎಂ ಸದಾನಂದ ಗೌಡ ಅವರು ಪುತ್ತೂರಿಗೆ ಭೇಟಿ ನೀಡಿದ್ದ ವೇಳೆ ಪತ್ರಕರ್ತರು ಪುತ್ತೂರಿನ ಬಿಜೆಪಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರ ಪರಿಹಾರವನ್ನು ಹೇಗೆ ಮಾಡುತ್ತೀರಿ ಎಂದು ಕೇಳಿದಾಗ ಪುತ್ತೂರಿನ ಶುದ್ಧೀಕರಣ ನನ್ನ ಲೆವೆಲ್ ನದ್ದು ಅಲ್ಲ, ಅದು ನನ್ನ ಲೆವೆಲ್ಗಿಂತಲೂ ಸಣ್ಣದು. ನಾನು ಮುಖ್ಯಮಂತ್ರಿ ಆಗಿ, ಕೇಂದ್ರ ಸಚಿವನಾಗಿ ಕಾರ್ಯನಿರ್ವಹಿಸಿದವನು. ಹೀಗಾಗಿ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಇದು ಬಿಜೆಪಿ ಪಾಳಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಪಷ್ಟೀಕರಣ ಕೊಟ್ಟಿರುವ ಸದಾನಂದ ಗೌಡರು ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ ಪಕ್ಷ ಶುದ್ಧೀಕರಣ ವಿಚಾರ ಬಂತು. ಪುತ್ತೂರಿನ ಬಿಜೆಪಿ ಬಗ್ಗೆ ಕೇಳಿದಾಗ ಅದು ನನ್ನ ಲೆವೆಲ್ಲಿಗೆ ಬರುವುದಿಲ್ಲ ಎಂದು ಹೇಳಿದ್ದೆ. ಅಂದರೆ ಅದು ನನ್ನ ಲೆವೆಲ್ಲಿಂದ ಮೇಲ್ಪಟ್ಟದ್ದು, ನನ್ನ ಹಿರಿಯರು ಮಾತನಾಡಬೇಕೆ ಹೊರತು ನಾನು ಅದರಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ ಎಂದರು.
ಪುತ್ತೂರಿನ ಬಿಜೆಪಿಯ ವಿಚಾರದಲ್ಲಿ ನಮ್ಮ ಹಿರಿಯರ ತೀರ್ಮಾನವೇ ಅಂತಿಮ ಮತ್ತು ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಕಳೆದ ಚುನಾವಣೆ ನಂತರ ಹಲವರು ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇಂದು ನನ್ನ ಮಾತನ್ನು ಅಪಾರ್ಥ ಬರುವ ರೀತಿಯಲ್ಲಿ ಸೋಷಿಯಲ್ಲಿ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. ಇದು ನನ್ನ ಮನಸ್ಸಿಗೆ ನೋವು ತಂದಿದೆ ಎಂದರು.

