ಪಶ್ಚಿಮ ಬಂಗಾಳದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರದಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ಪಿಎಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ಈಗ ಒಂದು ಸ್ಫೋಟಕ ತಿರುವು ಸಿಕ್ಕಿದೆ


ಬಿಜೆಪಿ ನಾಯಕ ಮತ್ತು ರಾಜ್ಯದ ಹೊಸ ಸಿಎಂ ಎಂದೇ ಬಿಂಬಿತವಾಗಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರ ನಾಥ್ ರಥ್ ಅವರನ್ನು ಹಾಡಹಗಲೇ ಮಧ್ಯಮಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ದುಷ್ಕರ್ಮಿಗಳು ಸುವೇಂದು ಅಧಿಕಾರಿಯ ಆಪ್ತನನ್ನು ಗುಂಡಿಟ್ಟು ಕೊಲೆ ಮಾಡಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈಗ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ಸಂಗತಿ ಬೆಳಕಿಗೆ ಬರುತ್ತಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನಾಗಿದ್ದ ಚಂದ್ರನಾಥ್ ರಾಥ್ ಹತ್ಯೆ ಪೂರ್ವನಿಯೋಜಿತವಾಗಿದ್ದು, ಇದಕ್ಕಾಗಿ ಸುಮಾರು 45 ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಚಂದ್ರನಾಥ್ ರಾಥ್ ಸಂಚರಿಸುತ್ತಿದ್ದ ಮಾರ್ಗ, ಅವರ ದಿನಚರಿ ಹಾಗೂ ಭದ್ರತಾ ಚಲನವಲನಗಳ ಬಗ್ಗೆ ಹಂತ ಹಂತವಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. ಹತ್ಯೆಗೆ ಬಳಸಿದ ವಾಹನವನ್ನು ಜಾರ್ಖಂಡ್ನಿಂದ ತರಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾರಿನ ನಂಬರ್ಪ್ಲೇಟ್ ಹಾಗೂ ಚಾಸಿಸ್ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದ್ದು, ಆರೋಪಿಗಳು ಯಾವುದೇ ಸುಳಿವು ಬಿಟ್ಟುಕೊಡದಂತೆ ಸೂಕ್ಷ್ಮವಾಗಿ ಯೋಜನೆ ರೂಪಿಸಿದ್ದರೆಂದು ಪೊಲೀಸರು ಶಂಕಿಸುತ್ತಿದ್ದಾರೆ.
ಘಟನೆಯ ದಿನ ರಾತ್ರಿ, ಚಂದ್ರನಾಥ್ ರಾಥ್ ತಮ್ಮ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ದಾಳಿ ನಡೆದಿದೆ. ಮೊದಲು ಒಂದು ಕಾರು ಅವರ ವಾಹನದ ದಾರಿಯನ್ನು ತಡೆದಿದ್ದು, ತಕ್ಷಣವೇ ಬೈಕ್ನಲ್ಲಿ ಬಂದ ಶೂಟರ್ಗಳು ಸಮೀಪದಿಂದ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ರಾಥ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಅವರ ಚಾಲಕರಿಗೂ ಗುಂಡೇಟು ತಗುಲಿ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲೇ ಹಲವು ಕಾರ್ತೂಸ್ಗಳು ಪತ್ತೆಯಾಗಿದ್ದು, ವೃತ್ತಿಪರ ಶೂಟರ್ಗಳ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

