ಅಮೆರಿಕ (America) ಮತ್ತು ಇರಾನ್ (Iran) ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮೂಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗೆ ಮಹತ್ವದ ಮನವಿಯೊಂದನ್ನು ಮಾಡುವುದರ ಜೊತೆಗೆ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.


ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ನಾಗರಿಕರ ಸಹಕಾರ ಅಗತ್ಯ. ಹೀಗಾಗಿ ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂಬ ಅಚ್ಚರಿಯ ಮನವಿಯನ್ನು ಮಾಡಿದರು. ಹಬ್ಬಗಳು ಮತ್ತು ಶುಭ ಸಮಾರಂಭಗಳ ಹೆಸರಿನಲ್ಲಿ ಅತಿಯಾದ ಹೂಡಿಕೆಯನ್ನು ಮಾಡುವುದಕ್ಕಿಂತ, ದೇಶದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸುವುದು ಮುಖ್ಯ ಎಂದು ಕರೆ ನೀಡಿದ್ದಾರೆ.
ಅಲ್ಲದೆ ಮನೆಯಲ್ಲಿ ನಿಷ್ಪ್ರಯೋಜಕವಾಗಿ ಬಿದ್ದಿರುವ ಚಿನ್ನವು ದೇಶದ ಆರ್ಥಿಕತೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಬದಲಾಗಿ, ಜನರು ತಮ್ಮಲ್ಲಿರುವ ಚಿನ್ನವನ್ನು ‘ಚಿನ್ನದ ನಗದೀಕರಣ ಯೋಜನೆ’ (Gold Monetization Scheme) ಅಡಿಯಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಇಡಬೇಕು. ಇದರಿಂದ ಜನರಿಗೆ ಬಡ್ಡಿಯೂ ಸಿಗುತ್ತದೆ ಮತ್ತು ಆ ಚಿನ್ನವು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದು ಆಮದು ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಭಾವನಾತ್ಮಕ ಬೆಲೆಯಿದೆ. ಮದುವೆ, ಮುಂಜಿಗಳಂತಹ ಕಾರ್ಯಕ್ರಮಗಳಲ್ಲಿ ಚಿನ್ನವಿಲ್ಲದೆ ನಡೆಯುವುದಿಲ್ಲ ಎಂಬ ನಂಬಿಕೆಯಿದೆ. ಆದರೆ, ಪ್ರಧಾನಿಯವರ ಈ ನೇರವಾದ ಕರೆ ಜನಸಾಮಾನ್ಯರಲ್ಲಿ ಆಲೋಚನೆ ಹುಟ್ಟುಹಾಕಿದೆ. ಆರ್ಥಿಕ ತಜ್ಞರ ಪ್ರಕಾರ, ಒಂದು ವೇಳೆ ದೇಶದ ದೊಡ್ಡ ವರ್ಗವು ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಿದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದರು.

